ಕರ್ನಾಟಕ ಚಲನಚಿತ್ರ ವಾಣಿಜ್ಯ (Film Chamber) ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಅವರ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು (Siddaramaiah) ಭೇಟಿ ಮಾಡಿ, ಸಿನಿಮಾ ರಂಗದ ಕುರಿತಾದ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ. ಸಿಎಂ ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಭಾ.ಮಾ ಹರೀಶ್, ಚಿತ್ರೋದ್ಯಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಸಿಎಂ ಗಮನಕ್ಕೆ ತಂದಿದ್ದೇವೆ ಅಂದರು.
‘ವಾಣಿಜ್ಯ ಮಂಡಳಿ ವತಿಯಿಂದ ಒಂದಷ್ಟು ಸಮಸ್ಯೆಗಳ ಬಗ್ಗೆ ಸಿಎಂ ಅವರಿಗೆ ಮನವಿ ಕೊಟ್ಟಿದ್ದೇವೆ. ಚಿತ್ರರಂಗದ ಧ್ಯೇಯೋದ್ದೇಶಗಳ ಬಗ್ಗೆಯೂ ಸಿಎಂ ಮುಂದೆ ಪ್ರಸ್ತಾಪ ಮಾಡಲಾಯ್ತು. ಅದರಲ್ಲೂ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಹಾಗೂ ಕಂಠೀರವ ಸ್ಟುಡಿಯೋ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಚರ್ಚೆ ಮಾಡಲಾಯಿತು. ಈ ಎರಡೂ ಹುದ್ದೆಗಳನ್ನು ಸಿನಿಮಾದವರಿಗೆ ಕೊಡಿ ಅಂತ ಕೇಳಿದ್ದೇವೆ. ಸಿಎಂ ಕೂಡ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ’ ಎಂದಿದ್ದಾರೆ ಭಾ.ಮಾ.ಹರೀಶ್. ಇದನ್ನೂ ಓದಿ:ಪಿಎಚ್ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್
ಇದೇ ಸಂದರ್ಭದಲ್ಲಿ ಸೆನ್ಸಾರ್ ಮಂಡಳಿಯಲ್ಲಿನ ಗೊಂದಲಗಳ ಬಗ್ಗೆ ಮಾತನಾಡಿದ ಭಾ.ಮಾ. ಹರೀಶ್, (Bha.Ma.Harish) ‘ಸೆನ್ಸಾರ್ ಮಂಡಳಿಯು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಸೆನ್ಸಾರ್ ಮಂಡಳಿಯಲ್ಲಿನ ಸಮಸ್ಯೆಗಳ ಕುರಿತು ಈ ಹಿಂದೆ ಲೋಕಸಭಾ ಸಂಸದರಿಗೆ ಮನವಿ ಮಾಡಿದ್ದೇವೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಸೆನ್ಸಾರ್ ಮಂಡಳಿ ಸದಸ್ಯರಾಗಿ ಆಯ್ಕೆ ಮಾಡಿ ಎಂದು ಕೇಳಿದ್ದೆವು. ಆದರೆ, ಸೆನ್ಸಾರ್ ಮಂಡಳಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಿದ್ದರಿಂದ ಸಮಸ್ಯೆ ಆಗ್ತಿದೆ. ಈ ವಿಚಾರಕ್ಕೆ ಸಂಬಂಧಪಟ್ಟ ಲೋಕಸಭೆ ಸದಸ್ಯರಿಗೆ ಮತ್ತೆ ಭೇಟಿಯಾಗಿ ಮನವಿ ಮಾಡುತ್ತೇವೆ’ ಎಂದರು.