– ಸರ್ಕಾರದ ವಿರುದ್ಧ ಹಿಂದೂಗಳ ಆಕ್ರೋಶ
ಚಿಕ್ಕಮಗಳೂರು: ಸದ್ಯದಲ್ಲೇ ಅಯೋಧ್ಯೆಯ ಹೋರಾಟವನ್ನು ನೆನಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಒಂದು ಕಣ್ಣಿಗೆ ಬೆಣ್ಣೆ-ಒಂದು ಕಣ್ಣಿಗೆ ಸುಣ್ಣವೆಂಬ ನೀತಿಯಿಂದ ಹಿಂದೂ ಸಂಘಟಕರಿಗೆ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಜಿಲ್ಲಾಡಳಿತ ಸರ್ಕಾರದ ಏಜೆಂಟ್ ನಂತೆ ವರ್ತಿಸುತ್ತಿದೆ ಅಂತಿರೋ ಹಿಂದೂ ಸಂಘಟಕರು, ಡಿಸೆಂಬರ್ 3ರಂದು ದತ್ತಪೀಠದಲ್ಲಿ ನಡೆಯೋದೇ ಬೇರೆ ಎಂದು ಹೇಳುತ್ತಿದ್ದಾರೆ. ಆದರೆ ಇನ್ನೂ 11 ದಿನಗಳ ಕಾಲ ಕಾಫಿನಾಡು ಚಿಕ್ಕಮಗಳೂರು ಬೂದಿ ಮುಚ್ಚಿದ ಕೆಂಡ ಎನ್ನುವುದರಲ್ಲಿ ಅನುಮಾನವೇ ಬೇಡ.
ಸರ್ಕಾರ ಅಲ್ಪಸಂಖ್ಯಾತರ ಮನವೊಲಿಕೆ ಮಾಡ್ತಿದ್ಯಾ? ಹಿಂದೂಗಳ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡ್ತಿದ್ಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿಗೆ ಬಜರಂಗದಳ ಹಾಗೂ ವಿಎಚ್ಪಿಯು ಚಾಲನೆ ನೀಡಿದೆ. 200ಕ್ಕೂ ಅಧಿಕ ಕಾರ್ಯಕರ್ತರು ಗುರುವಾರ ಮಾಲಾಧಾರಣೆಯೂ ಮಾಡಿದ್ದಾರೆ. ಆದರೆ ಜಿಲ್ಲಾಡಳಿತ ರಥಯಾತ್ರೆಗೆ ಬ್ರೇಕ್ ಹಾಕಿದೆ. ಈದ್-ಮಿಲಾದ್ ಮೆರವಣಿಗೆಗೆ ಅವಕಾಶ ಕೊಟ್ಟ ಜಿಲ್ಲಾಡಳಿತ ರಥಯಾತ್ರೆಗೆ ಅವಕಾಶ ಕೊಟ್ಟಿಲ್ಲ. ಇದು ಹಿಂದೂ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದ್ದು, ಸರ್ಕಾರಕ್ಕೆ ತಕ್ಕ ಉತ್ತರ ಕೊಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.
ದತ್ತ ಜಯಂತಿ ಅಂಗವಾಗಿ ರಥಯಾತ್ರೆ ಮೂಲಕ ಸಾರ್ವಜನಿಕರಿಗೆ ದತ್ತ ಪೀಠದ ಮಾಹಿತಿ ನೀಡೋದು ಹಿಂದೂ ಸಂಘಟನೆಯ ಉದ್ದೇಶ. ಆದರೆ ಜಿಲ್ಲಾಡಳಿತ ಈದ್-ಮಿಲಾದ್ ಹಬ್ಬದ ನೆಪವೊಡ್ಡಿ ನಮಗೆ ಅನುಮತಿ ನೀಡಿಲ್ಲ. ನಾವು ಮಾಡುತ್ತಿರೋ ಯಾತ್ರೆ ಯಾರ ವಿರುದ್ಧವೂ ಅಲ್ಲ, ರಾಜಕೀಯವೂ ಅಲ್ಲ. ಆದರೆ ಜಿಲ್ಲಾಡಳಿತ ಸರ್ಕಾರದ ಜೊತೆಗೂಡಿ ನಮ್ಮನ್ನ ಹತ್ತಿಕ್ಕಲು ಮುಂದಾಗಿದೆ ಎಂದು ಹಿಂದೂ ಸಂಘಟಕರು ಹೇಳುತ್ತಾರೆ.
ಒಟ್ಟಿನಲ್ಲಿ ಇನ್ನೂ 11 ದಿನ ಚಿಕ್ಕಮಗಳೂರು ಬೂದಿ ಮುಚ್ಚಿದ ಕೆಂಡದಂತಿರುತ್ತೆ. ಈದ್-ಮಿಲಾದ್ ಹಾಗೂ ಬೃಹತ್ ಶೋಭಾಯಾತ್ರೆ ಒಂದೇ ದಿನವಿರೋದ್ರಿಂದ ಪೊಲೀಸರು ಜಿಲ್ಲೆಯಾದ್ಯಂತ ಹದ್ದಿನ ಕಣ್ಣು ಇಟ್ಟಿದ್ದಾರೆ.