ದಾವಣಗೆರೆ: ಸಾಹಿತಿಗಳಿಗೆ ಪತ್ರ (Threat Letter to Kannada Writers) ಬರೆದು ಮನವಿ ಮಾಡಿರಬಹುದು. ಆದರೆ ಆತ ಬೆದರಿಕೆ ಒಡ್ಡಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಶಿವಾಜಿ ರಾವ್ ಸಹೋದರ ಗುರುರಾಘವೆಂದ್ರ ಜಾಧವ್ ಹೇಳಿದ್ದಾರೆ.
ಸಾಹಿತಿಗಳಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ (CCB Police) ಬಂಧನಕ್ಕೆ ಒಳಗಾದ ನಂತರ ಮಾಧ್ಯಮಗಳ ಜೊತೆ ಗುರುರಾಘವೆಂದ್ರ ಜಾಧವ್ ಮಾತನಾಡಿ ಸಹೋದರನ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದನ್ನೇ ಓದಿ: ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ – ದಾವಣಗೆರೆ ಮೂಲದ ಹಿಂದೂ ಸಂಘಟನೆಯ ಸಂಚಾಲಕ ಅರೆಸ್ಟ್
ಆತನಿಗೆ ಹಿಂದುತ್ವದ ಮೇಲೆ ಒಲವಿತ್ತು. ಆತ ಶಿವಮೊಗ್ಗದಲ್ಲಿ ನಡೆಯುವ ಹಿಂದುತ್ವದ ಕಾರ್ಯಕ್ರಮಗಳಿಗೆ ಹೋಗಿಬರುತ್ತಿದ್ದ. ಪ್ರತಿನಿತ್ಯ ಭಗವದ್ಗೀತೆ ಓದುತ್ತಿದ್ದ. ಹಿಂದೂ ಧರ್ಮದ ಬಗ್ಗೆ ಆತನಿಗೆ ಅಪಾರ ಪ್ರಮಾಣದ ಗೌರವವಿತ್ತು. ಆದರೆ ಅದಕ್ಕಾಗಿ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದ್ದಾನೆ ಎಂಬ ವಿಚಾರದಲ್ಲಿ ನನಗೆ ನಂಬಿಕೆ ಇಲ್ಲ. ಆತ ಪತ್ರ ಬರೆದಿರಬಹುದು. ಪತ್ರದಲ್ಲಿ ಸಾಹಿತಿಗಳ ಭಾಷಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮನವಿ ಮಾಡಿರಬಹುದು. ಆದರೆ ಬೆದರಿಕೆ ಹಾಕುವ ವ್ಯಕ್ತಿತ್ವ ಆತನದ್ದಲ್ಲ ಎಂದು ಹೇಳಿದ್ದಾರೆ.
ಬೆದರಿಕೆ ಪತ್ರ ಬರೆದಿದ್ದಾರೆ ಎಂಬುದು ನಮಗೆ ನಂಬಲಾಗದ ವಿಚಾರವಾಗಿದೆ. ಆತ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಬೆಳಗ್ಗೆ ಹೋದರೆ ರಾತ್ರಿ 10 ಗಂಟೆಗೆ ಮನೆಗೆ ಮರಳುತ್ತಿದ್ದ. ಅಲ್ಲಿಯೂ ಆತ ಒಳ್ಳೆಯ ಹೆಸರನ್ನೇ ಗಳಿಸಿದ್ದಾನೆ. ಆತ ಈ ಕೃತ್ಯ ಎಸಗಿದ್ದಾನೆ ಎಂಬುದು ನನಗೆ ನಂಬಲಾಗುತ್ತಿಲ್ಲ ಎಂದರು.
ಆತನಿಗೆ ಇನ್ನೂ ಮದುವೆ ಆಗಿಲ್ಲ, ಯಾವಾಗಲೂ ಹಿಂದುತ್ವ ಎಂದು ಸುತ್ತಾಡುತ್ತಿದ್ದ. ಬಂಧನದ ಬಳಿಕವಷ್ಟೇ ನಮಗೆ ಈ ವಿಚಾರ ಗೊತ್ತಾಗಿದೆ. ಪೊಲೀಸರು ಆತನನ್ನು ಬಂಧಿಸಿರುವುದಾಗಿ ತಿಳಿಸಲು ಕರೆ ಮಾಡಿದ್ದರು. ಬಳಿಕ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೆಚ್ಚಿನ ಮಾಹಿತಿಯನ್ನು ಪೊಲೀಸರು ಇನ್ನಷ್ಟೇ ನೀಡಬೇಕು ಎಂದಿದ್ದಾರೆ. ಇದನ್ನೇ ಓದಿ: ವ್ಯಕ್ತಿಗಳ ಬ್ರೈನ್ ವಾಷ್ ಮಾಡಿ ಆಯುಧ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ: ಕುಂ.ವೀರಭದ್ರಪ್ಪ
Web Stories