ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ (Darshan) ಮತ್ತು ಗ್ಯಾಂಗ್ ವಿರುದ್ಧ ಪೊಲೀಸರು ಒಟ್ಟು 9 ಸೆಕ್ಷನ್ಗಳ (IPC Sections) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರಂಭದಲ್ಲಿ 302, 201 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ತನಿಖೆ ವೇಳೆ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿರುವ ಪೊಲೀಸರು 9 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 201, 120-ಬಿ, 355, 384, 143,147,148, ರೆ/ವಿ 149 ಅಡಿಯಲ್ಲಿ ಪ್ರಕರಣಗಳನ್ನ ದಾಖಲಿಸಲಾಗಿದೆ ಎಂದು ʻಪಬ್ಲಿಕ್ ಟಿವಿʼಯಲ್ಲಿ ಲಭ್ಯವಾದ ರಿಮ್ಯಾಂಡ್ ಕಾಪಿಯಲ್ಲಿ ಪೊಲೀಸರು (Bengaluru Police) ತಿಳಿಸಿದ್ದಾರೆ. ಯಾವ ಸೆಕ್ಷನ್ಗಳು ಏನು ಹೇಳುತ್ತವೆ ಎಂಬುದನ್ನು ನಾವಿಲ್ಲಿ ನೋಡಬಹುದು…
ಸೆಕ್ಷನ್ 302 – ಕೊಲೆಗೆ ದಂಡನೆ
ಸೆಕ್ಷನ್ 201 – ಅಪರಾಧಿಯನ್ನು ರಕ್ಷಿಸುವುದಕ್ಕಾಗಿ ತಪ್ಪು ಮಾಹಿತಿ ಕೊಡುವುದು, ಸಾಕ್ಷ್ಯ ನಾಶ
ಸೆಕ್ಷನ್ 120(ಬಿ) – ಕೊಲೆ ಮಾಡಲು ಮಾಡಿಕೊಂಡ ಅಪರಾಧಿಕ ಒಳ ಸಂಚು. ಕೃತ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಶಿಕ್ಷೆ ವಿಧಿಸಬೇಕು
ಸೆಕ್ಷನ್ 355 – ತೀವ್ರ ಉದ್ರೇಕದಿಂದಲ್ಲದೇ ವ್ಯಕ್ತಿಗೆ ಅವಮಾನ ಮಾಡಲು ಅವನ ಮೇಲೆ ಹಲ್ಲೆ, ಅಥವಾ ಅಪರಾಧಿಕ ಬಲಪ್ರಯೋಗ ಮಾಡುವುದು
ಸೆಕ್ಷನ್ 384 – ಬಲಾಗ್ದ್ರ ಹಣಕ್ಕಾಗಿ ದಂಡನೆ / ಸುಲಿಗೆ
ಸೆಕ್ಷನ್ 143 – ಕಾನೂನು ಬಾಹಿರ ಕೃತ್ಯ ಎಸಗಿದವರಿಗೆ 6 ತಿಂಗಳ ವರೆಗೆ ಜೈಲು ಅಥವಾ ಸಮಾನಾಂತರ ದಂಡ ವಿಧಿಸಬಹುದಾದ ದಂಡನೆ
ಸೆಕ್ಷನ್ 147 – ದೊಂಬಿ ಗಲಾಟೆ ಮಾಡಿದರೆ ದಂಡನೆ
ಸೆಕ್ಷನ್ 148 – ಮಾರಕ ಆಯುಧಗಳನ್ನು ಬಳಸಿ ದೊಂಬಿ ಮಾಡುವುದು
ಸೆಕ್ಷನ್ 149 – ಒಂದೇ ಉದ್ದೇಶ ಈಡೇರಿಸಲು ಮಾಡಲಾದ ಅಪರಾಧಗಳ ಬಗ್ಗೆ ವಿಧಿಸಿರುವ ಕೂಟದ ಪ್ರತಿಯೊಬ್ಬ ಸದಸ್ಯನೂ ತಪ್ಪಿತಸ್ಥನಾಗುವುದು / ಕೃತ್ಯಕ್ಕೆ ಒಳ ಸಂಚು
ʻಡಿ’ ಗ್ಯಾಂಗ್ ಪೊಲೀಸ್ ಕಸ್ಟಡಿ ಇಂದು ಅಂತ್ಯ:
ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಾ ಗೌಡ, ವಿನಯ್ ಸೇರಿದಂತೆ ಹಲವರ ಪೊಲೀಸ್ ಕಸ್ಟಡಿ ಅವಧಿ ಇಂದು (ಗುರುವಾರ) ಮುಕ್ತಾಯಗೊಳ್ಳಲಿದೆ. ಜೂನ್ 11ರಂದು ಆರೋಪಿಗಳನ್ನು ಬಂಧಿಸಲಾಗಿದ್ದು, ಈವರೆಗೆ ಪೊಲೀಸರು ವಿವಿಧ ರೀತಿಯಲ್ಲಿ ವಿಚಾರಣೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇಂದಿಗೆ 17 ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಹೀಗಾಗಿ, ಜೂನ್ 20ರ ಮಧ್ಯಾಹ್ನದ ನಂತರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈಗಾಗಲೇ ದರ್ಶನ್ ಮತ್ತವರ ಗ್ಯಾಂಗ್ನ ಆರೋಪಿಗಳನ್ನ ಪೊಲೀಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದಾರೆ. ಸ್ಥಳ ಮಹಜರು ನಡೆಸಿ, ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ, ಸ್ವಇಚ್ಚಾ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹೀಗಾಗಿ ಮತ್ತೆ ಡಿ ಗ್ಯಾಂಗ್ ನ ಪೊಲೀಸ್ ಕಸ್ಟಡಿಗೆ ಕೇಳದಿರಲು ತೀರ್ಮಾನಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಮನವಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.