ಶಿವಮೊಗ್ಗ: ಪೊಲೀಸರು ಕಿರುಕುಳ ಕೊಡುತ್ತಿದ್ದಾರೆ ಅಂತಾ ಬಿಜೆಪಿ ಕಾರ್ಯಕರ್ತನೊಬ್ಬ ಫೇಸ್ ಬುಕ್ ಲೈವ್ ವೀಡಿಯೋ ಮಾಡಿಕೊಳ್ಳುತ್ತ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೊಸನಗರ ತಾಲೂಕಿನ ನಗರ ಸಮೀಪದ ಬೈಸೆ ಗ್ರಾಮದಲ್ಲಿ ನಡೆದಿದೆ.
ಬೈಸೆ ಗ್ರಾಮದ ಮಿಥುನ್ ಶೆಟ್ಟಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ. ತೀವ್ರ ಅಸ್ವಸ್ಥಗೊಂಡಿದ್ದ ಮಿಥುನ್ನನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಿಥುನ್ ಸುಮಾರು ದಿನಗಳಿಂದ ಫೇಸ್ಬುಕ್ ಹಾಗೂ ವಾಟ್ಸಪ್ಗಳಲ್ಲಿ ಸಾಮಾಜಿಕ ಸಾಮರಸ್ಯ ಕದಡುವ ಸಂದೇಶಗಳನ್ನು ಹಾಕುತ್ತಿದ್ದ. ಹೀಗಾಗಿ ಸಬ್ಇನ್ಸ್ಪೆಕ್ಟರ್ ಈ ಹಿಂದೆ ಮಿಥುನ್ನನ್ನು ಠಾಣೆಗೆ ಕರೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದರು.
ಗಣಪತಿ ಹಬ್ಬ ನಿಮಿತ್ತ ಯಾವುದೇ ಗಲಾಟೆ ಆಗದಂತೆ ಎಚ್ಚರವಹಿಸಲು ಪೊಲೀಸರು ಸೋಮವಾರ ಮತ್ತೆ ಮಿಥುನ್ನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಮನನೊಂದ ಮಿಥುನ್ ತಮ್ಮ ಮನೆಯ ಸಮೀಪದಲ್ಲಿ ಕುಳಿತು ಫೇಸ್ಬುಕ್ ಲೈವ್ ಮಾಡಿಕೊಂಡು ಪೊಲೀಸರ ವಿರುದ್ಧ ದೂರಿದ್ದಾನೆ.
ನನ್ನ ಮೇಲೆ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ. ನಿನ್ನೆ ದಿನ ಠಾಣೆಗೆ ಕರೆದುಕೊಂಡು ಹೋಗಿ ಹೊಡೆದು, ನನ್ನ ಬಳಿ ಇದ್ದ ಹಣವನ್ನು ಕಸಿದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ನನಗೆ ಪದೇ ಪದೇ ತೊಂದರೆ ಕೊಡುತ್ತಿದ್ದಾರೆ. ನಾನು ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದು, ಶಾಸಕರಾದ ಆರಗ ಜ್ಞಾನೇಂದ್ರ ಅವರು ನನಗೆ ಸಹಾಯ ಮಾಡಬೇಕು. ನನಗೆ ಬದುಕಲು ಇಷ್ಟವಿಲ್ಲ, ನಾನು ವಿಷ ಕುಡಿದು ಸಾಯುತ್ತೇನೆ ಎಂದು ಹೇಳುತ್ತಾ ವಿಷ ಕುಡಿದಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv