ಬೆಂಗಳೂರು: ಜಿಪಂ (Zilla Panchayat), ತಾಪಂ (Taluk Panchayat) ಮೀಸಲಿಟ್ಟಿದ್ದ ಬಳಕೆಯಾಗದ ಅನುದಾನ ವಾಪಸ್ ಪಡೆದು ಹಣ ಬಳಕೆ ಆರೋಪ ಮಾಡಿದ್ದು, ಎಲ್ಲಿಗೆ ಬಳಸಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಬಿಜೆಪಿ ಪರಿಷತ್ ಸದಸ್ಯ ಡಿ.ಎಸ್.ಅರುಣ್ (D S Arun) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಸಿಎಂ ವಿರುದ್ಧ ದೂರಿನ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯ ಹಣಕಾಸು ಸಚಿವರು. ಜೆಡ್ಪಿ-ಟಿಪಿ (ಜಿಲ್ಲಾ ಪಂಚಾಯತಿ -ತಾಲ್ಲೂಕು ಪಂಚಾಯತಿ) ಬಳಕೆ ಆಗದ ಹಣ ಎಷ್ಟು ಇದೆ ಎಂದು ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರ ಬಳಿ ಕೇಳಿದ್ದೆ. ಆಗ ಅವರು 1,953 ಕೋಟಿ ರೂ. ಬಳಕೆ ಆಗದ ಹಣ ಇದೆ ಎಂದಿದ್ದರು. ಅದರಲ್ಲಿ 1,494 ಕೋಟಿ ರೂ. ಖಜಾನೆಗೂ ಜಮಾ ಆಗಿಲ್ಲ ಎಂದು ಪ್ರಶ್ನಿಸಿದಾಗ ನಿಯಮಿತವಾಗಿ ಪೇಮೆಂಟ್ ಜಮೆ ಆಗ್ತಾ ಇದೆ ಎಂದು ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದರು.
ಖರ್ಚಾಗದೇ ಇದ್ದ ಹಣ ಸಂಚಿತ ನಿಧಿ ಮೂಲಕ ಸರ್ಕಾರಕ್ಕೆ ಬರಬೇಕು. ಅಲ್ಲದೆ ಆ ಹಣ ಬಳಕೆ ಆಗುವಾಗ ಶಾಸಕರ ಅನುಮತಿ ಪಡೆಯಬೇಕು. ನಾನು ಹಣಕಾಸು ಇಲಾಖೆಗೂ ಪತ್ರ ಬರೆದಿದ್ದೆ, ಅಲ್ಲೂ ಹಣ ಜಮಾ ಆಗಿಲ್ಲ, ಆ ಹಣ ಎಲ್ಲಿಗೆ ಹೋಯ್ತು….? ಎಂದು ಪ್ರಶ್ನಿಸಿದ್ದಾರೆ.
ಜೆಡ್ಪಿ-ಟಿಪಿಗೆ ಇಟ್ಟ ಹಣ ಎಲ್ಲಿಗೆ ಹೋಯ್ತು..? ಜೆಡ್ಪಿ-ಟಿಪಿಯಲ್ಲಿ ಹಿಂದುಳಿದ ವರ್ಗದವರೆ ಜಾಸ್ತಿ ಇದ್ದಾರೆ. ಈ ಹಣದ ಬಳಕೆ ಸಂಬಂಧಿಸಿದಂತೆ ತನಿಖೆ ಆಗಬೇಕು. ಇದಕ್ಕೆಲ್ಲಾ ಹಣಕಾಸು ಸಚಿವರೇ ಹೊಣೆ ಎಂದರು. ಅದಕ್ಕಾಗಿಯೇ ನಾನು ಸಿದ್ದರಾಮಯ್ಯ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ್ದೇನೆ. ಸಾರ್ವಜನಿಕ ಖಾತೆ ಸಮಿತಿಗೂ ದೂರು ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.