ಬೆಂಗಳೂರು: ರೈಲ್ವೇಯ ಟ್ರ್ಯಾಕ್ ಲೈನ್ ಮೆನ್ ನ ಸಮಯ ಪ್ರಜ್ಞೆಯಿಂದಾಗಿ ಇಂದು ಭಾರೀ ಅನಾಹುತವೊಂದು ತಪ್ಪಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಇಗ್ಗಲೂರು ಸಮೀಪದ ರೈಲು ಹಳಿಯಲ್ಲಿ ಬಿರುಕು ಬಿಟ್ಟಿತ್ತು. ಎಂದಿನಂತೆ ಇಂದು ಬೆಳಗ್ಗೆ ರೈಲ್ವೇಯ ಟ್ರ್ಯಾಕ್ ಮೆನ್ ಗಳು ತಪಾಸಣೆಗೆ ತೆರಳಿದಾಗ ರೈಲು ಹಳಿಯಲ್ಲಿ ಬಿರುಕು ಬಂದು ಹಳಿ ಕಡಿತವಾಗಿದ್ದು, ಗಮನಕ್ಕೆ ಬಂದಿದೆ.
ಇನ್ನೇನು ಬಾಣಸವಾಡಿಯಿಂದ -ಹೊಸೂರಿಗೆ ತೆರಳಬೇಕಿದ್ದ ರೈಲು ನಿಲ್ದಾಣ ಬಿಟ್ಟಿತ್ತು. ತಕ್ಷಣ ಲೈನ್ ಮೆನ್ ಗಳು ನಿಲ್ದಾಣಕ್ಕೆ ವಿಷಯ ಮುಟ್ಟಿಸಿ ರೈಲು ತಡೆದಿದ್ದಾರೆ. ಅಲ್ಲದೇ ತಕ್ಷಣ ರೈಲು ಹಳಿ ಸರಿಪಡಿಸಿ ಮಾರ್ಗ ಸುಗಮಗೊಳಿಸಿದರು.
ಘಟನೆಯಿಂದಾಗಿ ಇಂದು ಒಂದು ಗಂಟೆ ಕಾಲ ರೈಲು ತಡವಾಗಿ ತೆರಳಿದವು. ಆದರೆ ರೈಲ್ವೇ ಟ್ರ್ಯಾಕ್ ಲೈನ್ ಮೆನ್ ಗಳ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಹಾಗೆಯೇ ಟ್ರ್ಯಾಕ್ ಮೆನ್ ಗಳ ಸಮಯ ಪ್ರಜ್ಞೆಗೆ ಮೇಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.