ಬೆಂಗಳೂರು: ಅದೃಷ್ಟವೆಂದರೆ ಹೀಗಿರಬೇಕು. ಅದೃಷ್ಟ ಎಲ್ಲಾ ಕಾಲಕ್ಕೂ ಚೆನ್ನಾಗಿರಲ್ಲ. ಹಾಗೆ ಗ್ರಹಚಾರ ಕೂಡ ಎಲ್ಲಾ ಟೈಮಲ್ಲೂ ನೆಟ್ಟಿಗಿರುವುದಿಲ್ಲ. ಆದರೆ ಪುಣ್ಯವೆಂಬಂತೆ ಬಹಳ ದೊಡ್ಡ ದುರಂತವೊಂದು ಸಣ್ಣದರಲ್ಲೇ ತಪ್ಪಿದೆ.
ಪೊಲೀಸ್ ಹೊಯ್ಸಳ ವಾಹನ ರಸ್ತೆ ಪಕ್ಕದ ಹೊಂಡಕ್ಕೆ ವಾಲಿ ನಿಂತಿದೆ. ಪಕ್ಕದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಾ ಇರೋದ್ರಿಂದ ಪಕ್ಕದ ರಸ್ತೆಯ ಅಂಚಿನಲ್ಲೇ ಒಂದು ದೊಡ್ಡ ಹಳ್ಳದ ರೀತಿ ಬಿದ್ದು ಬಿಟ್ಟಿದೆ. ಆ ಹಳ್ಳದಲ್ಲಿ ಮಳೆ ನೀರು ಸಂಪೂರ್ಣವಾಗಿ ತುಂಬಿ ನಿಂತಿದ್ದರಿಂದ ಹೊಯ್ಸಳ ವಾಹನದ ಚಾಲಕನಿಗೆ ಅದು ರಸ್ತೆ ಎಂದೇ ಅನಿಸಿದೆ. ಹಾಗೆ ರಸ್ತೆಯಿಂದ ಮುಂದೆ ಬರುತ್ತಾ ಇದ್ದ ಹಾಗೆ ಹೊಯ್ಸಳ ವಾಹನದ ಚಕ್ರಗಳೆರಡು ಕೂಡ ಹೊಂಡಕ್ಕೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ನಗರದ ಹೆಣ್ಣೂರು ರಸ್ತೆಯ ಫ್ಲೈಓವರ್ ಪಕ್ಕದಲ್ಲಿ ಈ ಘಟನೆ ನಡೆದಿದ್ದು, ಹೊಯ್ಸಳ ವಾಹನದಲ್ಲಿ ರಾತ್ರಿ ಗಸ್ತು ತಿರುಗ್ತಾ ಇದ್ದ ಇಬ್ಬರು ಪೊಲೀಸ್ ಪೇದೆಗಳು ಅದೃಷ್ಟವಶಾತ್ ಪಾರಾಗಿದ್ದಾರೆ. ರಸ್ತೆ ಕಾಮಗಾರಿ ನಡೆದಿರುವುದರಿಂದ ಪಕ್ಕದಲ್ಲಿ ದೊಡ್ಡ ಹೊಂಡ ಬಿದ್ದಿದೆ. ಆದರೆ ಹೊಂಡ ಇರೋದು ಕೂಡಾ ಯಾರ ಗಮನಕ್ಕೂ ಬರುತ್ತಾ ಇರಲಿಲ್ಲ. ಯಾಕೆಂದರೆ ಸಂಪೂರ್ಣವಾಗಿ ಅಲ್ಲಿ ನೀರು ನಿಂತಿದ್ದರೂ ಯಾವುದೇ ರೀತಿಯ ಬ್ಯಾರಿಕೇಡ್ ಗಳನ್ನು ಸ್ಥಳದಲ್ಲಿ ಇಡಲಾಗಿಲ್ಲ.
ಬೇರೆ ವಾಹನಗಳು ಕೂಡ ಇದೇ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದು, ಮುಂದಾಗಬಹುದಾಗಿದ್ದ ದುರಂತಗಳನ್ನು ಈ ಪೊಲೀಸ್ ವಾಹನ ನೆಲಕ್ಕೆ ಆತುಕೊಂಡು ತಪ್ಪಿಸಿದೆ. ಸದ್ಯ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ಆದರೆ ಕಾಮಗಾರಿ ನಡಿಯುತ್ತಾ ಇದ್ದರೆ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಇರೋದು ಮಾತ್ರ ಒಂದು ದುರಂತ. ಬ್ಯಾರಿಕೇಡ್ನನ್ನು ಕೂಡ ಅಡ್ಡ ಇಡದೇ ಇರುವುದರಿಂದ ಹೀಗೊಂದು ಸಣ್ಣಮಟ್ಟದ ಅಪಘಾತ ಸಂಭವಿಸಿ ದೊಡ್ಡ ದುರಂತವನ್ನ ತಪ್ಪಿಸಿದೆ.