ಮಡಿಕೇರಿ: ಸ್ನೇಹಿತರೊಂದಿಗೆ ನರಿಯಂದಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇಲಾವರ ಜಲಪಾತ ವೀಕ್ಷಣೆಗೆ ತೆರಳಿ ಸಾವನ್ನಪ್ಪಿದ್ದ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯ ಮೃತದೇಹ ಇಂದು ಪತ್ತೆಯಾಗಿದೆ.
ಕೂಡಗು ಮೂಲದ ಜೆಪಿ ನಗರದಲ್ಲಿ ನೆಲೆಸಿರುವ ಕಾವೇರಪ್ಪ ಅವರ ಪುತ್ರ ದರ್ಶನ್ (22) ಜಲಪಾತದಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಮೃತಪಟ್ಟಿದ್ದ. ಬೆಂಗಳೂರಿನ ಕೆಎಸ್ಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ದರ್ಶನ್ ನಾಲ್ವರು ಸ್ನೇಹಿತರೊಂದಿಗೆ ಮಡಿಕೇರಿ ದಸರಾ ವೀಕ್ಷಣೆಗೆಂದು ಕೊಡಗಿಗೆ ಬಂದು, ಭಾನುವಾರ ಮಧ್ಯಾಹ್ನ ಚೇಲಾವರ ಜಲಪಾತ ವೀಕ್ಷಣೆಗೆ ತೆರಳಿದ್ದ.
ಜಲಪಾತದಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ದರ್ಶನ್ ಕಾಲುಜಾರಿ ಜಲಪಾತದ ಸುಳಿಯಲ್ಲಿ ಸಿಲುಕಿಕೊಂಡಿದ್ದ. ನೀರಿನ ರಭಸಕ್ಕೆ ಮೇಲೆ ಬಾರದೇ ಜಲಪಾತದಲ್ಲಿ ಮುಳುಗಿ ಮೃತಪಟ್ಟಿದ್ದ. ದರ್ಶನ್ ನೀರಿನಲ್ಲಿ ಮುಳುಗಿದ್ದ ಸುದ್ದಿಯನ್ನು ಸ್ನೇಹಿತರು ಗ್ರಾಮಸ್ಥರಿಗೆ ತಿಳಿಸಿದ್ದರು.
ಸ್ಥಳಕ್ಕೆ ಆಗಮಿಸಿದ ನಾಪೋಕ್ಲು ಠಾಣೆ ಪೊಲೀಸರ ಶವಕ್ಕಾಗಿ ಭಾನುವಾರ ಹುಡುಕಾಟ ನಡೆಸಿದ್ದರು. ಆದರೆ ಜಲಪಾತದಲ್ಲಿ ನೀರಿನ ರಭಸ ಹೆಚ್ಚಿದ್ದ ಹಿನ್ನೆಲೆಯಲ್ಲಿ ಶವ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆಯಿಂದ ಮೃತ ದೇಹಕ್ಕಾಗಿ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿ ದರ್ಶನ್ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.