ಚಿಕ್ಕಬಳ್ಳಾಪುರ: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಮೂವರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡು ರಸ್ತೆ ಮಧ್ಯೆ ನರಳಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಏನಿಗದೆಲೆ ಕ್ರಾಸ್ ಬಳಿ ನಡೆದಿದೆ.
ಬುಲೆಟ್ ಹಾಗೂ ಸ್ಪ್ಲೆಂಡರ್ ನಡುವೆ ಅಪಘಾತ ಸಂಭವಿಸಿದೆ. ಬುಲೆಟ್ ಸವಾರ ಚೇಳೂರು ಗ್ರಾಮದ ಚಂದ್ರಶೇಖರ್ ಹಾಗೂ ಬತ್ತಲಹಳ್ಳಿ ಗ್ರಾಮದವರಾದ ವೆಂಕಟರೋಣಪ್ಪ ಹಾಗೂ ಆತನ ಸ್ನೇಹಿತ ಗಾಯಗೊಂಡಿದ್ದಾರೆ.
ಅಪಘಾತ ನಂತರ ಆಂಬ್ಯುಲೆನ್ಸ್ ಸಕಾಲಕ್ಕೆ ಬಾರದ ಹಿನ್ನೆಲೆ, ಅರ್ಧ ಗಂಟೆಗೂ ಹೆಚ್ಚು ಕಾಲ ಮೂವರು ಗಾಯಾಳುಗಳು ರಸ್ತೆ ಮಧ್ಯೆ ನರಳಾಡಿದ್ದಾರೆ. ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರ ವಾಹನದಲ್ಲೇ ಗಾಯಾಳುಗಳನ್ನು ರವಾನೆ ಮಾಡಿದ್ದಾರೆ.
ದುರಾದೃಷ್ಟ ಎಂಬಂತೆ ಪೊಲೀಸ್ ಜೀಪ್ ಕೂಡ ಪಂಕ್ಚರ್ ಆಗಿದ್ದು, ಕೊನೆಗೆ ತಡವಾಗಿ ಬಂದ ಆಂಬ್ಯುಲೆನ್ಸ್ ನಲ್ಲಿ ಮೂವರು ಗಾಯಾಳುಗಳನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.