ಮಡಿಕೇರಿ: ಅಯೋಧ್ಯೆಯಲ್ಲಿ ನಡೆಯುತ್ತಿರುವ ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಯ (Pran Pratishtha) ಹಿನ್ನೆಲೆ ದೇಶಾದ್ಯಂತ ರಾಮನ ಭಕ್ತರು ವಿಶೇಷ ಆಚರಣೆಗಳನ್ನು ಆರಂಭಿಸಿದ್ದಾರೆ. ಅದೇ ರೀತಿ ಪಿರಿಯಾಪಟ್ಟಣದ 12 ವರ್ಷದ ಬಾಲಕನೊಬ್ಬ ರೂಬಿಕ್ಸ್ ಕ್ಯೂಬ್ನಲ್ಲಿ ರಾಮನ ಚಿತ್ರ ಬಿಡಿಸುವ ಮೂಲಕ ಜನರ ಗಮನ ಸೆಳೆದಿದ್ದಾನೆ.
ಗೋಣಿಕೊಪ್ಪ ರಸ್ತೆಯ ನಿವಾಸಿ ಮೃದುಲಾ ಮತ್ತು ಪಿ.ಎನ್ ವಿನಯ್ ದಂಪತಿ ಪುತ್ರ ಪ್ರಣವ್ ಈ ಸಾಧನೆ ಮಾಡಿದ ಬಾಲಕನಾಗಿದ್ದಾನೆ. ಪ್ರಣವ್ ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದು, ರೂಬಿಕ್ಸ್ ಕ್ಯೂಬ್ ಸಾಲ್ವ್ ಮಾಡುವುದರಲ್ಲಿ ಪರಿಣಿತನಾಗಿದ್ದಾನೆ. ಈತ 22 ವಿವಿಧ ರೀತಿಯ ಕ್ಯೂಬ್ಗಳನ್ನು ಸಾಲ್ವ್ ಮಾಡಿ ಕರ್ನಾಟಕ ಬುಕ್ ಆಫ್ ರೇಕಾರ್ಡ್ ದಾಖಲೆ ಮಾಡಿದ್ದಾನೆ. ಇಂಡಿಯಾ ಬುಕ್ ಆಫ್ ರೇಕಾರ್ಡ್ ನಲ್ಲಿಯೂ ಈತನ ಸಾಧನೆ ದಾಖಲಾಗಿದೆ. ಇದನ್ನೂ ಓದಿ: ಅಂಬೇಡ್ಕರ್ ಹೆಸರಲ್ಲೂ ರಾಮನಿದ್ದಾನೆ: ಛಲವಾದಿ ನಾರಾಯಣಸ್ವಾಮಿ
ಬರೋಬ್ಬರಿ 498 ಕ್ಯೂಬ್ ಗಳನ್ನು ಬಳಿಸಿ ಈಗ ಶ್ರೀರಾಮನ ಚಿತ್ರ ರಚಿಸಿದ್ದಾನೆ. ಈ ಮೂಲಕ ರಾಮನ ಪ್ರಾಣಪ್ರತಿಷ್ಠೆ ಹೊತ್ತಿನಲ್ಲಿ ತನ್ನದೇ ಶೈಲಿಯಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದಾನೆ. ಈ ಹಿಂದೆಯೂ ರೂಬಿಕ್ಸ್ ಕ್ಯೂಬ್ನಲ್ಲಿ ಪ್ರಣವ್ ಶ್ರೀಕೃಷ್ಣ, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಶಿವಕುಮಾರ ಸ್ವಾಮೀಜಿ ಮುಂತಾದ ಮಹನೀಯರ ಚಿತ್ರಗಳನ್ನು ರಚಿಸಿದ್ದ. ಅಲ್ಲದೇ ಪ್ರಧಾನಿ ಮೋದಿಯವರ (Narendra Modi )ಜನ್ಮ ದಿನಾಚರಣೆ ವೇಳೆ ಅವರ ಭಾವಚಿತ್ರವನ್ನು ರೂಬಿಕ್ಸ್ ಕ್ಯೂಬ್ ಬಳಸಿ ರಚಿಸಿದ್ದ.
ಇದರೊಂದಿಗೆ ಬಾಲಕ ಪಿಯಾನೋ ನುಡಿಸುವುದು, ಸ್ಕೇಟಿಂಗ್ ತರಬೇತಿ ಪಡೆದುಕೊಂಡಿದ್ದಾನೆ. ಈತನ ಸಾಧನೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ ವಿಚಾರ – ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರ