ಬೀದರ್: 10ನೇ ಕ್ಲಾಸ್ ಪಾಸಾಗಿರೋ ವೈದ್ಯರ ಸಹಾಯಕ ರೋಗಿಗಳಿಗೆ ಇಂಜೆಕ್ಷನ್ ಹಾಗೂ ಔಷಧಿ ನೀಡಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಸಾವಿನ ಮನೆಗೆ ಕಳಿಸುತ್ತಿರುವ ಭಯಾನಕ ಪ್ರಕರಣವೊಂದು ಬೀದರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಔರಾದ್ ತಾಲೂಕಿನ ತೋರಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 10 ಹಾಸಿಗೆಗಳ ಹೆರಿಗೆ ಆಸ್ಪತ್ರೆಯಲ್ಲಿರುವ ವೈದ್ಯರ ಸಹಾಯಕ ಶ್ರೀಕಾಂತ್ ಕೆಲಸ ಈಗ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಆಸ್ಪತ್ರೆಗೆ ವೈದ್ಯರು ವಾರಕ್ಕೆ ಒಂದು ಅಥವಾ ಎರಡು ದಿನ ಬಂದು ಇನ್ನುಳಿದ ದಿನ ಗೈರಾಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಶ್ರೀಕಾಂತ್ ವೈದ್ಯರ ಕೆಲಸವನ್ನು ಕ್ಷಣದಲ್ಲೇ ಮಾಡಿ ಮುಗಿಸುತ್ತಾನೆ.
10ನೇ ಕ್ಲಾಸ್ ಓದಿರುವ ಶ್ರೀಕಾಂತ್ಗೆ ಎಂಬಿಬಿಎಸ್ ನೀರು ಕುಡಿದಷ್ಟೆ ಸಲಿಸಾಗಿದೆ ಎಂದರೆ ನೀವು ನಂಬಲೇಬೇಕು. ಎರಡು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಶ್ರೀಕಾಂತ್ ವೈದ್ಯರ ಸಹಾಯವಿಲ್ಲದೆ ರೋಗಿಗಳಿಗೆ ಇಂಜೆಕ್ಷನ್ ನೀಡುತ್ತಾನೆ.
ವೈದ್ಯರ ಸಹಾಯಕ ಇಂಜೆಕ್ಷನ್ ಹಾಗೂ ಔಷಧಿ ಕೊಡುತ್ತಿರುವುದರಿಂದ ಭಯಭೀತರಾಗಿರುವ ರೋಗಿಗಳು, ಗರ್ಭಿಣಿಯರು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಒಂದು ತಿಂಗಳಿನಿಂದ ಫಾಲೋಅಪ್ ಮಾಡಿ ಆಸ್ಪತ್ರೆಗೆ ಭೇಟಿ ನೀಡಿದ ಟಿವಿ ಕ್ಯಾಮೆರಾಗೆ ರೆಡ್ ಹ್ಯಾಂಡಾಗಿ ಈ ಸಹಾಯಕನ ಬಣ್ಣ ಬಯಲು ಮಾಡಿದೆ.
ಕ್ಯಾಮೆರಾ ನೋಡುತ್ತಿದಂತೆ ಕಕ್ಕಾಬಿಕ್ಕಿಯಾದ ಸಹಾಯಕರು ಹೌದು ಸಾರ್ ನಾನು ವೈದ್ಯರು ಹೇಳಿದರೆ ಮಾತ್ರ ರೋಗಿಗಳಿಗೆ ಚಿಕಿತ್ಸೆ ನೀಡತ್ತೇವೆ ಎಂದು ಒಪ್ಪಿಕೊಂಡಿದ್ದಾನೆ.