ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಮೇಕೆದಾಟು 2.0 ಪಾದಯಾತ್ರೆಯನ್ನು ಸೋಮವಾರವೂ ಮುಂದುವರಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಇಂದು ಬಿಡದಿಯಿಂದ ಕೆಂಗೇರಿವರೆಗೂ 16 ಕಿ.ಮೀ ಪಾದಯಾತ್ರೆ ನಡೆಸುತ್ತಿದ್ದು, ಇಂದಿನ ಪಾದಯಾತ್ರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್, ಹರಿಪ್ರಸಾದ್, ಸಲೀಂ ಅಹ್ಮದ್, ಆಂಜನೇಯ ಸೇರಿದಂತೆ ಮಾಗಡಿ, ತುಮಕೂರು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಚಿತ್ರದುರ್ಗದ ಮುರುಘಾ ಶ್ರೀ, ಮಾದಾರ ಚನ್ನಯ್ಯ ಶ್ರೀ ಸೇರಿದಂತೆ ಹಲವಾರು ಮಠದ ಸ್ವಾಮೀಜಿಗಳು ಆಗಮಿಸಿದ್ದರು. ಶ್ರೀ ಬಾಲಗಂಗಾದರನಾಥ ಸ್ವಾಮೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪಾದಯಾತ್ರೆ ಆರಂಭಿಸಿದರು. ಇದನ್ನೂ ಓದಿ: ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಜಿ.ಪರಮೇಶ್ವರ್ ಅವರು, ಐತಿಹಾಸಿಕವಾದ ಪಾದಯಾತ್ರೆ ಮತ್ತೆ ಭಾನುವಾರದಿಂದ ಆರಂಭವಾಗಿದೆ. ಬೆಂಗಳೂರು ನಗರ, ಸುತ್ತಮುತ್ತಲ ಪ್ರದೇಶಕ್ಕೆ ನೀರು ಒದಗಿಸುವ ಯೋಜನೆಯಾಗಿದೆ. ಡಿಕೆಶಿ ನೀರಾವರಿ ಸಚಿವರಾಗಿದ್ದಾಗ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿಕೊಟ್ಟರು. ಮೇಕೆದಾಟು ಯೋಜನೆಯಿಂದ ತಮಿಳುನಾಡಿನವರಿಗೆ ಯಾವುದೇ ತೊಂದರೆಯಿಲ್ಲ. ಕೇಂದ್ರ ಸರ್ಕಾರ ಪ್ರಸ್ತಾವಣೆ ತಿರಸ್ಕರಿಸಿಲ್ಲ. ಕೆಲವು ನ್ಯೂನತೆಯಿದೆ. ಸರಿಪಡಿಸಿ ಕಳಿಸಿಕೊಡಿ ಅಂತಾ ಹೇಳಿದ್ದಾರೆ. ಆದರೆ ಇಲ್ಲಿಯವರೆಗೂ ಕೂಡ ಸರ್ಕಾರದ ಪರಿಸರ ಇಲಾಖೆ ಅನುಮೋದನೆ ಪಡೆದಿಲ್ಲ. ಸರ್ಕಾರ ಈ ಯೋಜನೆಗೆ ಬೇಕಾದ ಹಣ ಒದಗಿಸಿಲ್ಲ ಎಂದು ಕಿಡಿಕಾರಿದರು.
ಬಿಜೆಪಿಯವರು ಈ ಪಾದಯಾತ್ರೆಗೆ ರಾಜಕೀಯ ಬಣ್ಣ ಕಟ್ಟಿದ್ದರು. ಪಾದಯತ್ರೆಯಿಂದ ಕೋವಿಡ್ ಹೆಚ್ಚಾಗುತ್ತಿದೆ ಅಂತ ಹಬ್ಬಿಸಿದ್ದರು. ಜನರ ಯೋಗಕ್ಷೇಮ ಮುಖ್ಯ ಅಂತ ಪಾದಯಾತ್ರೆ ನಿಲ್ಲಿಸಿದೇವು. ಇದೀಗ ಕೋವಿಡ್ ಕಡಿಮೆಯಾಗಿದೆ. ವೈದ್ಯರು, ವಿಜ್ಞಾನಿಗಳ ಜೊತೆಗೆ ಮಾತನಾಡಿ ಮೇಕೆದಾಟು ಪಾದಯಾತ್ರೆ ಮತ್ತೆ ಆರಂಭವಾಗಿದೆ. ಯಾವುದೇ ಯೋಜನೆ ಪ್ರಾರಂಭ ಮಾಡಲು ಬದ್ಧತೆ ಇರಬೇಕು. ಆ ಬದ್ಧತೆಯಿಂದ ಈ ಪಾದಯಾತ್ರೆ ಆರಂಭವಾಗಿದೆ. ಈ ಪಾದಯಾತ್ರೆಗೆ ಡಿಕೆಶಿ ಬದ್ಧತೆಯಿಟ್ಟುಕೊಂಡು ಆರಂಭ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮಗಳಿಗೆ ನಾಮಕರಣ ಮಾಡಿದ ಕಿರುತೆರೆ ನಟಿ ಅಮೃತಾ ರಾಮಮೂರ್ತಿ
ನಂತರ ಮಾತನಾಡಿದ ಮುರುಘಾ ಶ್ರೀಗಳು, ಕರ್ನಾಟಕದಲ್ಲಿ ಹತ್ತು ಹಲವು ನೀರಾವರಿ ಹೋರಾಟ ನಡೆದಿವೆ. ಮೇಕೆದಾಟು, ಮಹದಾಯಿ ಹೋರಾಟ ಇರಬಹುದು. ನೀರು ನಮ್ಮೆಲ್ಲರ ಹಕ್ಕು. ಡಿಕೆಶಿ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದೆ. ನಮಗೆಲ್ಲಾ ಈ ಹೋರಾಟದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಸ್ವಾಮೀಜಿ ಕೆಲಸ ಅಂದರೆ ಸಾಮಾಜಿಕ ನ್ಯಾಯ ಒದಗಿಸುವುದು. ಇಲ್ಲಿ ಸತ್ಕಾರ್ಯ ನಡೆಯುತ್ತಿದೆ. ಈ ಕಾರ್ಯಕ್ಕೆ ನಮ್ಮ ಬೆಂಬಲ ಇದೆ. ಈ ಹಿಂದೆ ನಾವು ಹೋರಾಟಗಳಿಗೆ ಬೆಂಬಲ ನೀಡಿದ್ದೇವೆ. ಈ ಉರಿ ಬಿಸಿಲಿನಲ್ಲಿ ಹೋರಾಟ ಮಾಡುತ್ತಿದ್ದಾರೆ. ಎಸಿ ರೂಮಲ್ಲಿ ಅರಾಮಗಿ ನಾಯಕರು ಕೂಡ ಬಹುದಿತ್ತು. ಆದರೆ ಹೋರಾಟ ಮಾಡುತ್ತಿದ್ದಾರೆ ಇದು ರಾಜ್ಯದಲ್ಲಿ ಸಂಚಲನ ಮೂಡಿಸಿದ ಹೋರಾಟವಾಗಿದೆ ಎಂದರು.
ಜನರ ಮೂಲ ಸಮಸ್ಯೆ ಜಲ. ಒಂದೊಂದು ಭಾಗದಲ್ಲಿ ಒಂದೊಂದು ಜಲ ಸಮಸ್ಯೆ ಇದೆ. ಜಲ ಸಮಸ್ಯೆ ಹೋರಾಟದ ಮೂಲಕ ಬಗೆಹರಿಸಿಕೊಳ್ಳಬೇಕು. ಹೀಗಾಗಿ ಸ್ವಾಮೀಜಿಗಳಾದ ನಾವು ಪಾದಯಾತ್ರೆಗೆ ಬೆಂಬಲಿಸಿದ್ದೇವೆ. ರಾಜಕೀಯ ಸಂಘರ್ಷ ಬಗ್ಗೆ ನಾವು ಮಾತನಾಡಲ್ಲ. ರಾಜ್ಯವನ್ನು ಸಮೃದ್ಧಿಗೊಳಿಸುವ ವಿಚಾರದಲ್ಲಿ ರಾಜಕೀಯ ಪಕ್ಷಗಳು ಗಮನ ಕೊಡಲಿ ಎಂದು ಹೇಳಿದರು. ಇದನ್ನೂ ಓದಿ: ‘ಗೆಹ್ರೈಯಾನ್’ ಸಕ್ಸಸ್ ಸೆಲೆಬ್ರೇಟ್ ಮಾಡಲು ಬೆಂಗಳೂರಿಗೆ ಬರ್ತಿದ್ದಾರೆ ದೀಪಿಕಾ!
ಮಾದಾರ ಚನ್ನಯ್ಯ ಶ್ರೀಗಳು, ಗಡಿ, ಭೂಮಿಗಾಗಿ ಯುದ್ದ ಹೋರಾಟ ನಡೆಯುತ್ತಿದೆ. ಮುಂದೆಯೂ ಕೂಡ ನೀರಿಗಾಗಿ ಯುದ್ಧ ಮಾಡುವ ಪರಿಸ್ಥಿತಿ ಬರುತ್ತದೆ. ನೀರು ಸಮುದ್ರ ಸೇರುವ ಮುನ್ನ ಬಳಸಿಕೊಳ್ಳಬೇಕು. ನೆಲ, ಜಲಕ್ಕಾಗಿ ಹೋರಾಟ ಮಾಡುವವರಿಗೆ ನಮ್ಮ ಬೆಂಬಲವಿದೆ. ನಮ್ಮ ಜೀವಜಲ ಮೇಕೆದಾಟು. ಬೆಂಗಳೂರು ಜನರ ಕುಡಿಯುವ ನೀರಿಗೋಸ್ಕರ ಹೋರಾಟ ನಡೆಯುತ್ತಿದೆ.
ಈ ಯಾತ್ರೆ ಯಶಸ್ವಿಯಾಗಲಿ, ಅವರ ಮುಂದಿನ ಭವಿಷ್ಯ ಒಳ್ಳೆಯದಾಗಲಿ ಎಂದರು.