ಮಂಡ್ಯ: ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಿರುವ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಅಂಬುಲೆನ್ಸ್ ಅಭಾವ ಎದುರಾಗಿದೆ. ಹೀಗಾಗಿ ಮಂಡ್ಯ ಜಿಲ್ಲೆಯ ಸಮಾಜ ಸೇವಕ ಬಿ.ರೇವಣ್ಣ ಅವರು ಮೂರು ಅಂಬುಲೆನ್ಸ್ ಗಳನ್ನು ಮೇಲುಕೋಟೆ ಕ್ಷೇತ್ರದಲ್ಲಿ 24 ಗಂಟೆ ಸಂಚಾರ ಮಾಡಲು ನಿಯೋಜನೆ ಮಾಡಿದ್ದಾರೆ.
ಇಂದು ಮೂರು ಅಂಬುಲೆನ್ಸ್ ಗಳಿಗೆ ಪಾಂಡವಪುರ ತಾಲೂಕು ಕಚೇರಿ ಎದುರು ಚಾಲನೆ ನೀಡಲಾಯಿತು. ಈ ಮೂರು ಅಂಬುಲೆನ್ಸ್ ಗಳಲ್ಲಿ ಆಕ್ಸಿಜನ್ ಹಾಗೂ ತುರ್ತು ಸೇವೆಗಳು ಒಳಗೊಂಡಿವೆ. ಅಂಬುಲೆನ್ಸ್ ಗಳ ಮೇಲೆ ಹಾಗೂ ಪಾಂಡವಪುರ ತಾಲೂಕಿನ ವ್ಯಾಪ್ತಿಯ ಸರ್ಕಲ್ ಗಳಲ್ಲಿ ನಂಬರ್ ನ್ನು ಹಾಕಲಾಗಿದೆ. ಆ ನಂಬರ್ ಗೆ ಕರೆ ಮಾಡಿದರೆ ಅಂಬುಲೆನ್ಸ್ ತಕ್ಷಣ ಬರುವ ವ್ಯವಸ್ಥೆ ಮಾಡಲಾಗಿದೆ.
ಇದಲ್ಲದೇ ಪಾಂಡವಪುರ ತಾಲೂಕು ಆಸ್ಪತ್ರೆಗೆ ಆಕ್ಸಿಜನ್ ಉತ್ಪಾದನೆ ಮಾಡುವ ಐದು ಯಂತ್ರಗಳನ್ನು ನೀಡಿದ್ದು, ಜೊತೆ ಜನರಿಗೆ ಮೆಡಿಸಿನ್ ಕಿಟ್ನ್ನು ಸಹ ವಿತರಣೆ ಮಾಡಿದ್ದಾರೆ.