– ಗದಗನಲ್ಲಿ ಮಧ್ಯಾಹ್ನದಿಂದಲೇ ಬಸ್ ಸಂಚಾರ ವಿರಳ
ಧಾರವಾಡ: ನಾಳೆ ರಾಜ್ಯಾದ್ಯಂತ ಸಾರಿಗೆ ನೌಕರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ಕರೆ ನೀಡಿರುವ ಹಿನ್ನೆಲೆ ಧಾರವಾಡ ಜಿಲ್ಲಾಡಳಿತ ಖಾಸಗಿ ಬಸ್ ರಸ್ತೆಗಿಳಿಸಲು ಮುಂದಾಗಿದೆ. ಅಗತ್ಯ ಇರೋ ಮಾರ್ಗಗಳಲ್ಲಿ 408 ಖಾಸಗಿ ಬಸ್ ಕಾರ್ಯಾಚರಣೆ ನಡೆಸಲಿವೆ ಎಂದು ಪ್ರಕಟಣೆ ನೀಡಿರುವ ಜಿಲ್ಲಾಡಳಿತ, ಮ್ಯಾಕ್ಸಿಕ್ಯಾಬ್, ಖಾಸಗಿ ಪ್ರಯಾಣಿಕರ ವಾಹನ, ಶಾಲಾ ವಾಹನಗಳ ಬಳಕೆಗೆ ನಿರ್ಧಾರ ಮಾಡಲಾಗಿದೆ.
ಒಟ್ಟು 1311 ಖಾಸಗಿ ವಾಹನಗಳು ಲಭ್ಯ ಇದ್ದು, ಆ ಪೈಕಿ 408 ಖಾಸಗಿ ವಾಹನ ಕಾರ್ಯಾಚರಣೆ ನಡೆಸಲಿವೆ. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಮತ್ತು ಧಾರವಾಡ ಹೊಸ ಬಸ್ ನಿಲ್ದಾಣದಿಂದ ಖಾಸಗಿ ವಾಹನಗಳು ಓಡಾಡಲಿವೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಗದಗ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನದಿಂದಲೇ ಕೆಲವು ರೂಟ್ ಬಸ್ ಸಂಚಾರ ಬಂದ್ ಆಗಿವೆ. ಬಸ್ ಬಂದ್ ನಿಂದ ನಗರದ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಡಿದರು. ನಂತರ ಸಾರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಾಳೆ ಬಂದ್ ಅಂತ ಹೇಳಿ, ಈಗಲೇ ಬಸ್ ಇಲ್ಲಾಂದ್ರೆ ಹೇಗೆ ಆಂತ ಆಕ್ರೋಶ ವ್ಯಕ್ತಪಡಿಸಿದರು.
ಜನರ ಒತ್ತಡಕ್ಕೆ ಮಣಿದು ಕೆಲ ಹಳೆ ಬಸ್ ಗಳನ್ನು ರಸ್ತೆಗಿಳಿಸಿದರು. ತಳ್ಳು ತಳ್ಳು ಐಸಾ… ಇನ್ನು ತಳ್ಳು ಐಸಾ ಅನ್ನುತ್ತಾ, ಸಾರಿಗೆ ಸಿಬ್ಬಂದಿ, ಸಾರ್ವಜನಿಕರು ಬಸ್ ತಳ್ಳಿ ಸ್ಟಾರ್ಟ್ ಮಾಡಿದರು. ಒಂದಡೆ ಬಸ್ ಗಾಗಿ ಕಾದುಕುಳಿತು ಸುಸ್ತಾದ್ರೆ, ಮತ್ತೊಂದಡೆ ಬಂದ ಬಸ್ ತಳ್ಳಿ ಸುಸ್ತಾಗಬೇಕಾಯಿತು. ಚಾಲಕ ನಿರ್ವಾಹಕರು ಸೆಕೆಂಡ್ ಸ್ವಿಫ್ಟ್ ಗೆ ಬಾರದಕ್ಕೆ ಮೊದಲು ಸ್ವಿಫ್ಟ್ ಬಂದಂತಹ ಸಿಬ್ಬಂದಿಯ ಕೈಗೆ ಇಂತಹ ಹಳೆ ಬಸ್ ಕೊಟ್ಟು ರಸ್ತೆಗಿಳಿಸಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದರು.