ಮಂಗಳೂರು: ಪ್ರೇಮಿಗಳ ದಿನಕ್ಕೂ ಕರಾವಳಿಗೂ ಎಣ್ಣೆ ಸೀಗೆಕಾಯಿಯ ಸಂಬಂಧ. ಪ್ರತೀವರ್ಷ ವ್ಯಾಲೆಂಟೈನ್ಸ್ ಡೇ ಬಂದಾಗ ಕರಾವಳಿಯಲ್ಲಿ ಪ್ರೇಮಿಗಳ ದಿನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ಇದೀಗ ಈ ಬಾರಿಯೂ ಬಜರಂಗದಳ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಜರಂಗದಳ ದ.ಕ. ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಭಾರತ ದೇಶವು ಪುಣ್ಯ ಭೂಮಿ ವೈಶಿಷ್ಟ್ಯವಾದ ಸಂಸ್ಕೃತಿ ಸಂಸ್ಕಾರವನ್ನು ನಮ್ಮ ದೇಶ ಹೊಂದಿದೆ. ಅಲ್ಲದೆ ನಮ್ಮ ಸಂಸ್ಕೃತಿ ಆಚರಣೆಗಳಿಗೆ ಅದರದ್ದೇ ಆದ ಮಹತ್ವವಿದ್ದು, ಶತಮಾನಗಳ ಇತಿಹಾಸವನ್ನು ಹೊಂದಿದೆ. ಅದಾಗಿಯೂ ಭಾರತೀಯ ಸಂಸ್ಕೃತಿಗೆ ಸೆಡ್ಡು ಹೊಡೆಯುತ್ತಾ ಪಾಶ್ಚಿಮಾತ್ಯ ಸಂಸ್ಕೃತಿಗಳು ದಾಳಿ ಮಾಡುತ್ತಿವೆ ಎಂದು ಹೇಳಿದ್ದಾರೆ.
ಈ ಪಾಶ್ಚಿಮಾತ್ಯ ಸಂಸ್ಕೃತಿಗಳು ಯುವ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿವೆ. ನಮ್ಮ ಅಮೂಲ್ಯವಾದ ಸಂಸ್ಕೃತಿ ಆಚರಣೆ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದಕ್ಕೆ ಸ್ಪಷ್ಟ ಉದಾಹರಣೆ ಪ್ರೇಮಿಗಳ ದಿನ. ಹೀಗಾಗಿ ಬಜರಂಗದಳ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುತ್ತದೆ. ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಇದನ್ನು ಬಜರಂಗದಳ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ಪರಂಪರೆಯಲ್ಲಿ ಪ್ರೇಮಿಗಳ ದಿನಾಚರಣೆ ಸರಿಯಲ್ಲ. ಆದುದರಿಂದ ಪ್ರೇಮಿಗಳ ದಿನಾಚರಣೆ ಆಚರಿಸಬಾರದು. ನಗರದ ಎಲ್ಲಾ ಹೂ ಅಂಗಡಿ ಮತ್ತು ಗಿಫ್ಟ್ ಸೆಂಟರ್ ಗಳು ಪ್ರೇಮಿಗಳ ದಿನಾಚರಣೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು. ಈ ಮೂಲಕ ಈ ಆಚರಣೆಗೆ ಬೆಂಬಲ ಸೂಚಿಸಬಾರದು ಎಂದು ವಿನಂತಿಸುವುದಾಗಿ ಪುನೀತ್ ತಿಳಿಸಿದ್ದಾರೆ.