ಮಂಗಳೂರು: ಮಂಗಳೂರು ತಾಲೂಕು ಉಪನೋಂದಣಿ ಕಚೇರಿಗೆ 10 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಅವ್ಯವಸ್ಥೆಗಳ ಕುರಿತು ಸಾರ್ವಜನಿಕ ವಲಯದಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಕಳೆದ ಕೆಲದಿನದ ಹಿಂದೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರ ನೇತೃತ್ವದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಭರತ್ ಶೆಟ್ಟಿ ಅವರು ದಿಢೀರ್ ಭೇಟಿ ನೀಡಿರುವುದು ಫಲಪ್ರದವಾಗಿದೆ.
ಉಪನೊಂದಾವಣಿ ಕೇಂದ್ರದಲ್ಲಿ ಕಂಪ್ಯೂಟರ್, ಸರ್ವರ್ ಸೇರಿದಂತೆ ತಾಂತ್ರಿಂಕ ಸಮಸ್ಯೆಗಳು ಇರೋದ್ರಿಂದ ಸಾರ್ವಜನಿಕರು ದಿನಗಟ್ಟಲೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಸಚಿವರು ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸಮಸ್ಯೆಯ ಬಗ್ಗೆ ಬೆಳಕಿಗೆ ಬಂದಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಕಚೇರಿಯಲ್ಲಿ ನಿನ್ನೆ ಸಭೆ ನಡೆದಿದ್ದು, ಕಂದಾಯ ಇಲಾಖೆಯು ಅನುದಾನವನ್ನು ಹೆಚ್ಚುವರಿ ಕಂಪ್ಯೂಟರ್ ಹಾಗೂ ಆಪರೇಟರ್ ವ್ಯವಸ್ಥೆಗೆ 10 ಲಕ್ಷ ಅನುದಾನ ಬಿಡುಗಡೆಗೊಳಿಸಿದೆ.
ಕಂಪ್ಯೂಟರ್ ಹಾಗೂ ಆಪರೇಟರ್ ವ್ಯವಸ್ಥೆಗಳಿಗೆ ಸ್ಥಳದ ಅಭಾವವಿದ್ದು ಉಪನೋಂದಣಿ ಕಚೇರಿಯ ಕೊಠಡಿ ಸಂಖ್ಯೆ 8 ಹಾಗೂ 9ರ ನಡುವಿನ ಗೋಡೆಯನ್ನು ಕೆಡವಿ ಸ್ಥಳಾವಕಾಶ ಒದಗಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಕೋರಿದೆ. ಸಾರ್ವಜನಿಕರ ಬಹುಕಾಲದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯದ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ, ವಕೀಲರ ಸಂಘದ ಪ್ರಮುಖರಿಗೆ ಶಾಸಕ ವೇದವ್ಯಾಸ್ ಕಾಮತ್ ಧನ್ಯವಾದಗಳನ್ನು ತಿಳಿಸಿದ್ದಾರೆ.