ಬೆಂಗಳೂರು: ಸಂಕಮ್ಮನನ್ನ ತುಂಬಾ ಮಾಡರ್ನೈಸ್ ಮಾಡಿದ್ದಾರೆ ಎಂದು ಹೇಳುವ ಮೂಲಕ ರ್ಯಾಪರ್ ಚಂದನ್ ಶೆಟ್ಟಿ ಹಾಡಿಗೆ ಸಾಹಿತಿ ದೊಡ್ಡ ರಂಗೇಗೌಡ್ರು ಗರಂ ಆಗಿದ್ದಾರೆ.
ಚಂದನ್ ಶೆಟ್ಟಿ ಸಾಂಗ್ ವಿವಾದದ ಬಗ್ಗೆ ಮಾತನಾಡಿದ ದೊಡ್ಡ ರಂಗೇಗೌಡರು, ಐದು ಸಾವಿರ ವರ್ಷಗಳ ಇತಿಹಾಸ ಇರುವ ಸಾಹಿತ್ಯ ಪರಂಪರೆಗೆ ಚ್ಯುತಿ ಬರುವಂತೆ ಮಾಡಿದ್ದಾರೆ. ಸೃಜನ ಶೀಲನೆ ಕಷ್ಟದ ವಿಷಯ. ನಾನು ಸದಾ ಬರಹಗಾರರ ಪರವಾಗಿಯೇ ಇರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಾದಪ್ಪನ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ- ಕ್ಷಮೆ ಕೇಳಿದ ಚಂದನ್
ಈ ಕೋಲು ಮಂಡೆ ಸಾಂಗ್ನಲ್ಲಿ ಅತ್ಯಾಧುನಿಕ ರೂಪ ಕೊಡಲು ಹೋಗಿದ್ದಾರೆ. ಸಂಕಮ್ಮನನ್ನ ತುಂಬಾ ಆಧುನಿಕವಾಗಿ ರೂಪಿಸಿದ್ದಾರೆ. ನಾನು ನಿಮ್ಮಲ್ಲಿ ಕೇಳುವುದೇನೆಂದರೆ ಇದನ್ನ ದಯವಿಟ್ಟು ಡಿಲೀಟ್ ಮಾಡಿ. ನಾನು ಓದಿರುವ ಜಾನಪದ ಕೃತಿಯಲ್ಲಿ ಶಿವ ಶರಣೆಯ ಬಗ್ಗೆ ಎಲ್ಲಿಯೂ ಈ ರೀತಿ ಬರೆದಿಲ್ಲ. ಜನ ರೊಚ್ಚಿಗೇಳುವ ಮೊದಲು ಈ ಹಾಡನ್ನ ಡಿಲೀಟ್ ಮಾಡಿ ಎಂದಿದ್ದಾರೆ. ಇದನ್ನೂ ಓದಿ: ಮಲೆ ಮಹದೇಶ್ವರ ಭಕ್ತರ ಕೆಂಗಣ್ಣಿಗೆ ಗುರಿಯಾದ ಚಂದನ್ ಶೆಟ್ಟಿ
ನಾನು ಜನುಮದ ಜೋಡಿ ಮಾಡುವಾಗ ವಿ.ಮನೋಹರ್ ಮತ್ತು ನಾಗಾಭರಣ ಸೇರಿ ಸಾಹಿತ್ಯ ಬರೆದಿದ್ದು. ಈ ಹಾಡಿಗೆ ಜಾನಪದದ ಕೃತಿಯನ್ನೇ ಬರೆಯಬೇಕು. ಆದರೆ ಇಲ್ಲಿ ಎಲ್ಲೋ ಚಂದನ್ ಶೆಟ್ಟಿ ಎಡವಿದ್ದಾರೆ, ತಿರುಚಿದ್ದಾರೆ. ಒಬ್ಬ ಲೇಖಕ ಒಂದು ರೇಖೆಯ ಗಡಿಯನ್ನ ದಾಟಿದ್ದಾರೆ. ಮಾದಪ್ಪನ ಬಗ್ಗೆ ಪರಂಪರಗತವಾಗಿ ಅಧ್ಯಯನ ಮಾಡಿಕೊಂಡು ಬಂದಿದ್ದಾರೆ. ಅಂತವರಿಗೆ ಅಪಚಾರವಾಗುವ ನಿಟ್ಟಿನಲ್ಲಿ ಈ ಹಾಡು ಮೂಡಿಬಂದಿದೆ ಎಂದು ಗರಂ ಆದರು.
ಸಾಹಿತ್ಯ ಮತ್ತು ಚಿತ್ರೀಕರಣ ಎರಡನ್ನ ಬದಲಾಯಿಸಿ. ಹಾಡು ಬಿಟ್ಟರೆ ಯಾರಿಗೂ ಸಮಸ್ಯೆ ಇಲ್ಲ. ಚಂದನ್ ಶೆಟ್ಟಿ ಇದನ್ನ ಕೈ ಬಿಡಬೇಕು. ನಾವು ಇನ್ನೇನು ಹೊಸತನ ಮಾಡುವುದಕ್ಕೆ ಆಗಲ್ಲ. ಇರುವುದು ಅದೇ ಸ್ವರ ಅದರಲ್ಲೇ ಹೇಳಬೇಕು. ಹೂವಿನ ವಿಷಯದಲ್ಲಿ ಪ್ಲಾಸ್ಟಿಕ್ ಹೂವನ್ನ ಕೊಟ್ಟಿದ್ದಾರೆ. ಇದರಿಂದ ಜನಪದವನ್ನ ಕೆಣಕುವ ಪ್ರಯತ್ನ ಮಾಡಬೇಡಿ ಎಂದು ರಂಗೇಗೌಡರು ಕಿಡಿಕಾರಿದರು.