– ಐವರು ಭದ್ರತಾ ಸಿಬ್ಬಂದಿ ಹುತಾತ್ಮ
ಶ್ರೀನಗರ: ಮಂಗಳವಾರ ಬರಮುಲ್ಲಾದಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಗಾಯಗೊಂಡಿದ್ದ ಮತ್ತೊಬ್ಬ ಯೋಧ ಹುತಾತ್ಮರಾಗಿದ್ದು, ಈ ಮೂಲಕ ಒಟ್ಟು ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾದಂತಾಗಿದೆ. ಪಟ್ಟು ಬಿಡದ ಯೋಧರು ಹಾಗೂ ಪೊಲೀಸರು, ಜಂಟಿ ಕಾರ್ಯಾಚರಣೆ ನಡೆಸಿ ಮೂವರು ಲಷ್ಕರ್-ಎ-ತೈಬಾ(ಎಲ್ಇಟಿ) ಯೋಧರನ್ನು ಸೆದೆಬಡಿದಿದ್ದಾರೆ.
ಬರಾಮುಲ್ಲಾ ಜಿಲ್ಲೆಯ ಕ್ರೀರಿಯಲ್ಲಿ ನಾಕಾಬಂಧಿ ಹಾಕಿ ಯೋಧರು ಹಾಗೂ ಭದ್ರತಾ ಸಿಬ್ಬಂದಿ ಉಗ್ರರನ್ನು ಸೆದೆಬಡಿದಿದ್ದಾರೆ. ಮಂಗಳವಾರ ನಡೆದ ಗುಂಡಿನ ಚಕಮಕಿ ವೇಳೆ ಇಬ್ಬರು ಸಿಆರ್ ಪಿಎಫ್ ಯೋಧರು ಹಾಗೂ ಓರ್ವ ಪೊಲೀಸ್ ಹುತಾತ್ಮರಾಗಿದ್ದರು. ಅಲ್ಲದೆ ಇನ್ನೂ ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದವು. ಇದಾದ ಬಳಿಕ ಯೋಧರು ಎಲ್ಇಟಿ ಕಮಾಂಡರ್ ಸಜ್ಜದ್ ಅಲಿಯಾಸ್ ಹೈದರ್ ಸೇರಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಬರಾಮುಲ್ಲಾದಲ್ಲಿ ನಡೆದ ಕಾರ್ಯಾಚರಣೆ ತುಂಬಾ ಕಷ್ಟಕರವಾಗಿತ್ತು. ಯೋಧರು, ಪೊಲೀಸು ಗಸ್ತು ತಿರುಗುವಾಗ ಉಗ್ರರು ಹೊಂಚು ಹಾಕಿ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಸಿಆರ್ ಪಿಎಫ್ ಯೋಧರು, ಓರ್ವ ಪೊಲೀಸ್ ಸೇರಿ ಮೂವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ನಂತರ ಭದ್ರತಾ ಸಿಬ್ಬಂದಿ ಎನ್ಕೌಂಟರ್ ಆರಂಭಿಸಿದ್ದು, ಎಲ್ಇಟಿ ಪ್ರಮುಖ ಕಮಾಂಡರ್ ಸೇರಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದರು. ಘಟನೆ ನಡೆಯುತ್ತಿದ್ದಂತೆ ಮತ್ತಷ್ಟು ಉಗ್ರರು ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಮತ್ತಿಬ್ಬರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಇದರಲ್ಲಿ ಒಬ್ಬರು ಸೋಮವಾರ ಹುತಾತ್ಮರಾಗಿದ್ದಾರೆ. ಮತ್ತೊಬ್ಬರು ಇಂದು ಹುತಾತ್ಮರಾಗಿದ್ದಾರೆ.
ಈ ಕುರಿತು ಡಿಜಿಪಿ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದು, ಜಮ್ಮು ಕಾಶ್ಮೀರ ಭಾಗದಲ್ಲಿ ಸಜದ್ ಹೈದರ್ ಟಾಪ್ ಟೆನ್ ಉಗ್ರರ ಪಟ್ಟಿಯಲ್ಲಿದ್ದ. 2016ರಲ್ಲಿ ಈತ ಉಗ್ರ ಸಂಘಟನೆ ಸೇರಿದ್ದಾನೆ. ಈ ಹಿಝ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮಾಜಿ ಕಮಾಂಡರ್ ಆಗಿದ್ದಾನೆ. ಜುಲೈನಲ್ಲಿ ನಡೆದ ಬಿಜೆಪಿ ಜಿಲ್ಲಾಧ್ಯಕ್ಷ ವಾಸೀಮ್ ಬರಿತ ಹಾಗೂ ಅವರ ಕುಟುಂಬದ ಇಬ್ಬರು ಸದಸ್ಯರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ. ಅಲ್ಲದೆ ಹಲವು ಕುಟುಂಬಗಳನ್ನು ನಾಶಪಡಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಇಬ್ಬರು ಯೋಧರು ಹಾಗೂ ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿರುವುದು ದೊಡ್ಡ ನಷ್ಟ. ಆದರೆ ಪೊಲೀಸರು ಹಾಗೂ ಸೈನಿಕರು ಉಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಮುಖ ಉಗ್ರನ ಹತ್ಯೆಯಿಂದಾಗಿ ಅನೇಕ ಕುಟುಂಬಗಳು ನಿಟ್ಟುಸಿರು ಬಿಟ್ಟಿವೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ. ಜಮ್ಮು ಕಾಶ್ಮೀರದ ಬರಾಮುಲ್ಲಾದ ವಿಶೇಷ ಪೊಲೀಸ್ ಅಧಿಕಾರಿ ಮುಝಫರ್ ಅಲಿ, ಪೇದೆ ಲೋಕೇಶ್ ಶರ್ಮಾ, ಸಿಆರ್ ಪಿಎಫ್ ಯೋಧ ಖುರ್ಷಿದ್ ಖಾನ್ ಹುತಾತ್ಮರಾಗಿದ್ದಾರೆ.