– ಸುಧಾರಿತ ಸ್ಫೋಟಕ ಪತ್ತೆಹಚ್ಚಿದ ಭದ್ರತಾ ಸಿಬ್ಬಂದಿ
ಶ್ರೀನಗರ: ಪುಲ್ವಾಮಾದಲ್ಲೇ ಮತ್ತೊಮ್ಮೆ ಅದೇ ರೀತಿ ಸ್ಫೋಟ ನಡೆಸುವ ಉಗ್ರರ ಸಂಚು ವಿಫಲವಾಗಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.
ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲೇ ಮತ್ತೆ ಅಂತಹದ್ದೇ ಕೃತ್ಯ ಎಸಗಲು ಉಗ್ರರು ಮುಂದಾಗಿದ್ದರು. ಕಳೆದ ಬಾರಿಯಂತೆ ಈ ಬಾರಿ ಸಹ ಸುಧಾರಿತ ಸ್ಫೋಟಕ(ಐಇಡಿ)ವನ್ನು ಸೈನಿಕರ ವಾಹನಗಳು ಸಂಚರಿಸುವ ರಸ್ತೆ ಹಾಗೂ ಹೆದ್ದಾರಿಗಳಲ್ಲಿ ಇರಿಸಲಾಗುತ್ತಿದೆ. ಇದನ್ನು ಪತ್ತೆಹಚ್ಚುವುದು ಸೈನಿಕರಿಗೆ ಸವಾಲಾಗಿ ಪರಿಣಮಿಸಿದೆ. ಇದೀಗ ಭಾರೀ ಅನಾಹುತ ತಪ್ಪಿದಂತಾಗಿದ್ದು, ಸುಧಾರಿತ ಸ್ಫೋಟಕವನ್ನು ಸೈನಿಕರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಪೊಲೀಸ್ ಅಧಿಕಾರಿ ಮಾಹಿತಿ ನೀಡಿ, ಪುಲ್ವಾಮಾ ಜಿಲ್ಲೆಯ ತುಜಾನ್ ಗ್ರಾಮದ ಬಳಿಯ ಸೇತುವೆ ಕೆಳಗೆ ಉಗ್ರರು ಸುಧಾರಿತ ಸ್ಫೋಟಕವನ್ನು ಇರಿಸಿದ್ದರು. ಇದನ್ನು ಭದ್ರತಾ ಸಿಬ್ಬಂದಿ ಪತ್ತೆಹಚ್ಚಿದ್ದು, ವಶಪಡಿಸಿಕೊಂಡಿದ್ದಾರೆ.
ಉಗ್ರರು ರಸ್ತೆ ಹಾಗೂ ಹೈವೇಗಳಲ್ಲಿ ಸುಧಾರಿತ ಸ್ಫೋಟಕಗಳನ್ನು ಇಡುತ್ತಿದ್ದು, ಈ ಮೂಲಕ ಭದ್ರತಾ ಸಿಬ್ಬಂದಿ ಸಂಚರಿಸುವ ವಾಹನಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಉಗ್ರರ ಸಂಚು ತಡೆಯಲು, ಶ್ವಾನ ದಳ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ವಿವಿಧ ಉಪಕರಣಗಳ ನೆರವಿನಿಂದಾಗಿ ರಸ್ತೆಗಳು ಹಾಗೂ ಹೆದ್ದಾರಿಗಳನ್ನು ಸುರಕ್ಷಿತವಾಗಿರಿಸಲು ಮೊದಲ ಆದ್ಯತೆ ನೀಡಲಾಗಿದೆ.
ಇದಕ್ಕಾಗಿ ತರಬೇತಿ ನೀಡಲಾದ ವಿಶೇಷ ತಂಡವನ್ನು ರಚಿಸಲಾಗಿದ್ದು, ಇದಕ್ಕೆ ರೋಡ್ ಓಪನಿಂಗ್ ಪಾರ್ಟೀಸ್(ಆರ್ಓಪಿ) ಎಂದು ಕರೆಯಲಾಗುತ್ತದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.