ಬೆಂಗಳೂರು: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ(ಬಿಎಂಸಿಆರ್ಐ) ನನಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಆಯುರ್ವೇದ ವೈದ್ಯ ಗಿರಿಧರ್ ಕಜೆ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬಿಎಂಸಿಆರ್ಐಯ ನೈತಿಕ ಸಮಿತಿಯ ಅಧ್ಯಕ್ಷರು ನೀಡಿದ್ದಾರೆ ಎನ್ನಲಾದ ನೋಟಿಸ್ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ನೋಟಿಸಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಬಿಎಂಸಿಆರ್ಐಗೆ ಗಿರಿಧರ್ ಕಜೆ ಪತ್ರ ಬರೆದಿದ್ದಾರೆ.
ಜುಲೈ 17 ರಂದು ಬಿಎಂಸಿಆರ್ಐ ನೈತಿಕ ಸಮಿತಿ ನೋಟಿಸ್ ನೀಡಿದೆ ಎನ್ನಲಾದ ಕಾಪಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಇದರಿಂದಾಗಿ ನನಗೆ ಮತ್ತು ನನ್ನ ಆತ್ಮೀಯರಿಗೆ ಬಹಳ ಬೇಸರವಾಗಿದೆ. ಹೀಗಾಗಿ ಈ ನೋಟಿಸ್ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಪತ್ರ ಬರೆದಿದ್ದಾರೆ.
ಹರಿದಾಡುತ್ತಿರುವ ನೋಟಿಸ್ನಲ್ಲಿ ಏನಿದೆ?
ಕೋವಿಡ್-19 ಪಾಸಿಟಿವ್ ರೋಗಿಗಳಿಗೆ ನಿರ್ದಿಷ್ಟ ಆರೈಕೆಯ ಜೊತೆಗೆ ನಿಮ್ಮ ಭೌಮ್ಯ ಮತ್ತು ಸಾಥ್ಮಿಯಾ ಎಂಬ ಎರಡು ಮಾತ್ರೆಗಳ ದಕ್ಷತೆ ಮತ್ತು ಸುರಕ್ಷತೆಯನ್ನು ಮೌಲ್ಯಮಾಪನ ನಡೆಸಲು ಕ್ಲಿನಿಕಲ್ ಟ್ರಯಲ್ಗಾಗಿ ನೀವು ಬಿಎಂಸಿಆರ್ಐನ್ನು ಸಂಪರ್ಕ ಮಾಡಿದ್ದೀರಿ.
ಈ ಪ್ರಯೋಗ ಪ್ರಯೋಗ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಅಷ್ಟೇ ಅಲ್ಲದೇ ಬಿಎಂಸಿಆರ್ಐನ ನೈತಿಕ ಸಮಿತಿಗೆ ಯಾವುದೇ ಫಲಿತಾಂಶಗಳನ್ನು ಸಲ್ಲಿಸಿಲ್ಲ ಎಂಬುದು ನಿಮಗೆ ತಿಳಿದಿರಬಹುದು. ಹೀಗಿದ್ದರೂ ನೀವು ಪ್ರಯೋಗ ಯಶಸ್ವಿಯಾಗಿದೆ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದೀರಿ. ಈ ಹೇಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ರೀತಿಯ ಸೂಕ್ಷ್ಮ ಮಾಹಿತಿಯನ್ನು ತಿಳಿಸುವ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆದಿರಬೇಕು ಎಂಬುದು ನಿಮಗೆ ಗೊತ್ತಿದೆ.
ಇದು ಬಹಳ ಸೂಕ್ಷ್ಮ ವಿಚಾರವಾಗಿರುವ ಕಾರಣ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವಾಸ್ತವ ಪರಿಸ್ಥಿತಿಯ ಬಗ್ಗೆ ನೀವು ತಕ್ಷಣವೇ ಮಾಧ್ಯಮಗಳನ್ನು ಕರೆದು ಸ್ಪಷ್ಟನೆಯನ್ನು ನೀಡಿ. ಒಂದು ವೇಳೆ ತಪ್ಪಿದ್ದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿದ್ದಕ್ಕೆ ಈ ಪ್ರಯೋಗವನ್ನು ನಿಲ್ಲಿಸಬೇಕಾಗುತ್ತದೆ.