ಚಂಡೀಗಢ: ಆಗ ತಾನೇ ಮದುವೆಯಾದ 20 ವರ್ಷದ ಯುವತಿಯನ್ನು ಡಾಬಾ ಮಾಲೀಕನೊಬ್ಬ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಡಿಕೊಂಡ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಆರೋಪಿಯನ್ನು ರಾಜೇಶ್(30) ಎಂದು ಗುರುತಿಸಲಾಗಿದ್ದು, ಈತ ಪ್ರಿಯಾಂಕ ಎಂಬಾಕೆಯನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ಭಾನುವಾರ ಪಟೌಡಿ ಎಂಬ ಪ್ರದೇಶದಲ್ಲಿ ನಡೆದಿದೆ.
ಮೃತರಿಬ್ಬರೂ ಪಟೌಡಿಯ ನಂಕುವಾನ್ ಗ್ರಾಮದವರಾಗಿದ್ದು, ಹಲವು ವರ್ಷಗಳಿಂದ ಪರಿಚಯವಿದ್ದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಬ್ಬರ ಮಧ್ಯೆ ಸಂಬಂಧವಿತ್ತು. ಈ ವಿಚಾರವೇ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆಯ ಸಂಬಂಧ ತನಿಖೆ ನಡೆಸಿದಾಗ, ರಾಜೇಶ್ ಗೆ ಈಗಾಗಲೇ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಪ್ರಿಯಾಂಗೆ ಕಳೆದ ಜೂನ್ 29ರಂದು ಮದುವೆಯಾಗಿದ್ದು, ತವರು ಮನೆಗೆ ಬಂದಿದ್ದಳು. ಈ ವೇಳೆ ಆರೋಪಿ ಕೃತ್ಯವೆಸಗಿದ್ದಾನೆ. ಪ್ರಿಯಾಂಕ ಅಂಕಲ್ ರಾಮ್ಜಿಲಾಲ್ ಅವರು ಪೊಲೀಸರಿಗೆ ದೂರು ನೀಡಿದ ಬಳಿಕವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ.
ರಾಜೇಶ್ ಶನಿವಾರ ಪ್ರಿಯಾಂಕ ಮನೆಗೆ ಬಂದಿದ್ದು, ಅಲ್ಲದೆ ಆಕೆಯನ್ನು ತನ್ನ ಡಾಬಾಗೆ ಕರೆದುಕೊಂಡು ಹೋಗಿದ್ದಾನೆ ಎಂದು ಪ್ರಿಯಾಂಕ ಅಂಕಲ್ ಅರೋಪಿಸಿದ್ದಾರೆ. ಅಲ್ಲದೆ ರಾಜೇಶ್ ಜೊತೆ ಹೊರಹೋದ ಪ್ರಿಯಾಂಕ ತಡರಾತ್ರಿಯಾದರೂ ಮನೆಗೆ ವಾಪಸ್ ಆಗಲಿಲ್ಲ. ಇದರಿಂದ ಗಾಬರಿಗೊಂಡ ಆಕೆಯ ಕುಟುಂಬಸ್ಥರು ಪ್ರಿಯಾಂಕಳ ಹುಡುಕಾಟ ಆರಂಭಿಸಿದ್ದಾರೆ. ಹೀಗೆ ಹುಡುಕಡುತ್ತಿದ್ದಾಗ, ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ರಾಜೇಶ್ ಮಾಲೀಕತ್ವದ ಡಾಬಾ ಹಿಂಬದಿಯಲ್ಲಿ ಪ್ರಿಯಾಂಕ ಮೃತದೇಹ ಪತ್ತೆಯಾಗಿದೆ ಎಂದು ಲಾಲ್ ತಿಳಿಸಿದ್ದಾರೆ.
ರಾಜೇಶ್ ಮೊದಲು ನನ್ನ ಸೊಸೆಯ ಎದೆಗೆ ಗುಂಡು ಹಾರಿಸಿ ನಂತರ ಆತನ ತಲೆಗೆ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಲಾಲ್ ಪೊಲೀಸರ ಬಳಿ ಹೇಳಿದ್ದಾರೆ. ಇಬ್ಬರ ಮೃತದೇಹವೂ ಹತ್ತಿರ ಹತ್ತಿರವೇ ದೊರೆತಿದ್ದು, ಕೊಲೆ ಹಾಗೂ ಆತ್ಮಹತ್ಯೆಗೆ ಬಳಸಿದ್ದ ಪಿಸ್ತೂಲ್ ಕೂಡ ಸ್ಥಳದಲ್ಲಿ ಸಿಕ್ಕಿದೆ.
ಘಟನೆಯ ಮಹಿತಿ ಅರಿತ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸಿದ್ದಾರೆ. ಪಿಸ್ತಲ್ ವಶಕ್ಕೆ ಪಡೆದುಕೊಂಡಿದ್ದಾರೆ.