ಜೈಪುರ್: ಪ್ರೀತಿಸಿದವರು ಮನೆಯವರ ಒತ್ತಾಯಕ್ಕೆ ಮಣಿದು ಹೆತ್ತವರು ನೋಡಿದ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗುತ್ತಾರೆ. ಹಾಗೆಯೇ ರಾಜಸ್ಥಾನದಲ್ಲಿ ಕೂಡ ಇಂತದ್ದೇ ಒಂದು ಘಟನೆ ನಡೆದಿದೆ. ಆದರೆ ಇಲ್ಲಿ ಮದುವೆಯಾದ ಬಳಿಕ ಯುವತಿಗೆ ಯುವಕನನ್ನು ಬಿಟ್ಟಿರಲಾರದೆ, ಮದುವೆಯ ನಂತರ ತನ್ನ ಪ್ರಿಯತಮನ ಜೊತೆಗೆ ಯುವತಿ ಓಡಿ ಹೋಗಿದ್ದಾಳೆ. ಇದರಿಂದ ಸಿಟ್ಟಿಗೆದ್ದ ತಂದೆ ಯುವಕನ ಸಹೋದರ ಹಾಗೂ ಆತನ ಗೆಳೆಯನನ್ನು ಬರ್ಬರವಾಗಿ ಕೊಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.
ಈ ಘಟನೆ ರಾಜಸ್ಥಾನ ಜುಂಜುನ್ ಎಂಬ ಪ್ರದೇಶದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅನಿಲ್ ಜತ್ (40) ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಮಗಳು ಸುಮನ ಆಕೆಯ ಪತಿಯನ್ನು ಬಿಟ್ಟು ಪ್ರಿಯತಮ ಕೃಷ್ಣ ಜೊತೆ ಓಡಿಹೋಗಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಅನಿಲ್ ನೇರವಾಗಿ ಕೃಷ್ಣನ ಮನೆಗೆ ತೆರಳಿದ್ದಾನೆ. ಅಲ್ಲದೆ ನನ್ನ ಮಗಳು ವಾಪಸ್ ಬಾರದಿದ್ದರೆ ಕೃಷ್ಣನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಬಂದಿದ್ದಾನೆ.
ಹಾಗೆಯೇ ಮಗಳು ವಾಪಸ್ ಬರುತ್ತಾಳೆಂಬ ತಂದೆಯ ನಿರೀಕ್ಷೆ ಕೊನೆಗೂ ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ತಂದೆ ಮತ್ತೆ ಕೃಷ್ಣ ಮನೆಗೆ ತೆರಳಿದ್ದಾನೆ. ಅಲ್ಲದೆ ಕೃಷ್ಣ ಮನೆಯ ಮಹಡಿಯಲ್ಲಿ ಮಲಗಿದ್ದ ಆತನ ಸಹೋದರ ಹಾಗೂ ಗೆಳೆಯನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಮೃತ ಸಹೋದರನನ್ನು ದೀಪಕ್(20) ಹಾಗೂ ಆತನ ಗೆಳೆಯನನ್ನು ನರೇಶ್(19) ಎಂದು ಗುರುತಿಸಲಾಗಿದೆ. ಸೋಮವಾರ ಹಾಗೂ ಮಂಗಳವಾರದ ನಡುವೆ ಅನಿಲ್ ಈ ಕೃತ್ಯವೆಸಗಿದ್ದಾನೆ ಎಂದು ಪೊಲಿಸ್ ಅಧಿಕಾರಿ ದೇವೇಂದ್ರ ಪ್ರತಾಪ್ ತಿಳಿಸಿದ್ದಾರೆ.
ಅನಿಲ್ ಪುತ್ರಿ ಸುಮನಳನ್ನು ನರೇಂದ್ರ ಎಂಬಾತನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಆಕೆ ಜೂನ್ 2ರಂದು ತನ್ನ ಪ್ರಿಯತಮ ಕೃಷ್ಣ ಜೊತೆ ಪರಾರಿಯಾಗಿದ್ದೇ ತಂದೆಯ ಈ ಕೃತ್ಯಕ್ಕೆ ಕಾರಣವಾಗಿದೆ.
ಈಗಾಗಲೇ ಅನಿಲ್ ವಿರುದ್ಧ ವಂಚನೆ, ಗಲಭೆ ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದು ಸೇರಿದಂತೆ ಸುಮಾರು 5 ಪ್ರಕರಣಗಳು ದಾಖಲಾಗಿವೆ ಎಂದು ರಾಜಸ್ಥಾನ ಹಾಗೂ ಹರಿಯಾನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.