ನವದೆಹಲಿ: ಟಿ20 ಕ್ರಿಕೆಟ್ ಕ್ರಮೇಣ ಅಭಿಮಾನಿಗಳ ನೆಚ್ಚಿನ ಮಾದರಿಯಾಗುತ್ತಿದೆ. ಇದರಿಂದಾಗಿ ಅನೇಕ ಕ್ರಿಕೆಟ್ ಮಂಡಳಿಗಳು ಫ್ರ್ಯಾಂಚೈಸ್ ಲೀಗ್ಗಳನ್ನು ಪ್ರಾರಂಭಿಸಿವೆ. ಆದರೆ ಟೀಂ ಇಂಡಿಯಾ ಆಟಗಾರರಿಗೆ ಸಾಗರೋತ್ತರ ಲೀಗ್ಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ. ಈ ನಿಯಮವನ್ನು ಬದಲಾಯಿಸಲು ಮತ್ತು ಆಟಗಾರರಿಗೆ ವಿದೇಶಿ ಲೀಗ್ಗಳಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಹಿರಿಯ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಬಿಸಿಸಿಐಗೆ ಒತ್ತಾಯಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಲೀಗ್ ಆಗಿದೆ. ಬಿಗ್ ಬ್ಯಾಷ್ ಲೀಗ್, ದಿ ಹಂಡ್ರೆಡ್, ಮೆಝನ್ಸಿ ಸೂಪರ್ ಲೀಗ್ ಸೇರಿದಂತೆ ಅನೇಕ ಲೀಗ್ಗಳು ಲಾಭದಾಯಕವಾಗಿ ನಡೆಯುತ್ತಿವೆ. ಆದರೆ ಬಿಸಿಸಿಐ ಕ್ಯಾಲೆಂಡರ್ ಯಾವುದೇ ಗುತ್ತಿಗೆ ಆಟಗಾರರಿಗೆ ಈ ರೀತಿಯ ಸಾಗರೋತ್ತರ ಲೀಗ್ಗಳಲ್ಲಿ ಭಾಗವಹಿಸಲು ಅನುಮತಿ ನೀಡುವುದಿಲ್ಲ. ಅಷ್ಟೇ ಅಲ್ಲದೆ ಒಪ್ಪಂದದ ಪಟ್ಟಿಯಲ್ಲಿ ಇಲ್ಲದ ಆಟಗಾರರು ಸಹ ವಿದೇಶಿ ಟಿ20 ಟೂರ್ನಿಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಿವೃತ್ತಿಯ ಬಳಿಕವೇ ಭಾರತದ ಆಟಗಾರರು ವಿದೇಶಿ ಟೂರ್ನಿಗಳಲ್ಲಿ ಆಡಬಹುದಾಗಿದೆ.
ಈ ನಿಯಮವನ್ನು ಬದಲಾಯಿಸುವಂತೆ ಬಿಸಿಸಿಐಗೆ ಮನವಿ ಮಾಡಿಕೊಂಡಿರುವ ರಾಬಿನ್ ಉತ್ತಪ್ಪ, “ನಮಗೂ ವಿದೇಶಿ ಲೀಗ್ಗಳಲ್ಲಿ ಪಾಲ್ಗೊಳ್ಳಲು ದಯವಿಟ್ಟು ಅವಕಾಶವನ್ನು ನೀಡಿ. ದೇವರ ಮೇಲೆ ಆಣೆ ಇಟ್ಟು ಹೇಳುತ್ತೇನೆ, ಬೇರೆಲ್ಲೂ ಹೋಗಿ ಆಡಲು ನಮಗೆ ಅವಕಾಶ ದೊರೆಯದ ಕಾರಣ ನಮಗೂ ನೋವಾಗುತ್ತದೆ. ವಿದೇಶಿ ಲೀಗ್ಗಳಲ್ಲಿ ಪಾಲ್ಗೊಳ್ಳಲು ಇರುವ ನಿರ್ಬಂಧವನ್ನು ತೆಗೆದುಹಾಕಬೇಕು. ಇದರಿಂದ ನಮಗೆ ಇನ್ನಷ್ಟು ಕಲಿಯಲು ಮತ್ತು ಬೆಳೆಯಲು ಸಕಾಯಕವಾಗುತ್ತದೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ ಉತ್ತಪ್ಪ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಾರ್ಯ ವೈಖರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. “ಸೌರವ್ ಗಂಗೂಲಿ ಅವರು ಬಹಳ ಪ್ರಗತಿಪರ ಚಿಂತನೆಯ ಮನುಷ್ಯ. ಟೀಂ ಇಂಡಿಯಾವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸದಾ ಶ್ರಮಿಸುತ್ತಿರುವ ವ್ಯಕ್ತಿ. ಭಾರತ ಕ್ರಿಕೆಟ್ಗೆ ಅವರು ಅಡಿಪಾಯ ಹಾಕಿದರು. ಹೀಗಾಗಿ ಅವರಿಂದ ಪ್ರಮುಖ ಬದಲಾವಣೆಗಳ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಭಾರತದ ಮತ್ತೊಬ್ಬ ಅನುಭವಿ ಆಟಗಾರ ಸುರೇಶ್ ರೈನಾ ಅವರು ಗುತ್ತಿಗೆ ಪಡೆಯದ ಆಟಗಾರರಿಗೆ ವಿದೇಶಿ ಲೀಗ್ಗಳಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಬಿಸಿಸಿಐಗೆ ಒತ್ತಾಯಿಸಿದ್ದರು.