ನಿರ್ಭಯಾ ಪ್ರಕರಣದ ಅಪರಾಧಿ ಮುಖೇಶ್ ಅರ್ಜಿ ವಜಾ

Public TV
1 Min Read
Supreme Court

ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿ ಮುಖೇಶ್ ಅರ್ಜಿಯನ್ನು ಸುಪ್ರೀಂಕೋರ್ಟಿನ ತ್ರಿ ಸದಸ್ಯ ಪೀಠ ವಜಾಗೊಳಿಸಿದೆ. ಫೆಬ್ರವರಿ 1ರಂದು ಪ್ರಕರಣ ನಾಲ್ವರು ಕಾಮುಕರಿಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ.

ರಾಷ್ಟ್ರಪತಿಗಳ ಕ್ಷಮಾದಾನದ ತೀರ್ಪಿನ ವಿರುದ್ಧ ಮುಖೇಶ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದನು. ಇಂದು ಸುಪ್ರೀಂಕೋರ್ಟ್ ಮುಖೇಶ್ ಅರ್ಜಿಯನ್ನು ವಜಾಗೊಳಿಸಿದೆ. ಎಲ್ಲ ಕಾನೂನು ಹೋರಾಟದ ಅವಕಾಶಗಳು ಅಂತ್ಯಗೊಂಡಿದ್ದು, ಫೆಬ್ರವರಿ 1ರಂದು ಗಲ್ಲು ಶಿಕ್ಷೆಗೆ ಒಳಗಾಗೋದು ಖಚಿತವಾಗಿದೆ.

ರಾಷ್ಟ್ರಪತಿಗಳ ಕ್ಷಮಾದಾನದ ತೀರ್ಪನ್ನು ನ್ಯಾಯಾಂಗ ಸಮೀಕ್ಷೆಗೆ ಒಳಪಡಿಸಬೇಕೆಂದು ಮುಖೇಶ್ ಪರ ವಕೀಲರಾದ ಅಂಜನಾ ಪ್ರಕಾಶ್ ಮಂಗಳವಾರ ಅರ್ಜಿ ಸಲ್ಲಿಸಿದ್ದರು. ರಾಷ್ಟ್ರಪತಿಗಳ ಮುಂದೆ ಎಲ್ಲ ದಾಖಲಾತಿಗಳನ್ನು ಇರಿಸಿಲ್ಲ. ಕ್ಷಮಾದಾನದ ಅರ್ಜಿಯನ್ನು ಅವಸರದಲ್ಲಿ ವಜಾಗೊಳಿಸಲಾಗಿದೆ. ಈ ಮೂಲಕ ನ್ಯಾಯವನ್ನೇ ಕೊನೆಗೊಳಿಸಲಾಗುತ್ತಿದೆ ಎಂದು ಅಂಜನಾ ಪ್ರಕಾಶ್ ತಮ್ಮ ವಾದದಲ್ಲಿ ಹೇಳಿದ್ದರು.

ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ರಾಷ್ಟ್ರಪತಿಗಳ ಮುಂದೆ ಎಲ್ಲ ದಾಖಲೆಗಳನ್ನು ಇರಿಸಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ರಾಷ್ಟ್ರಪತಿಗಳು ಸೂಕ್ತವಾದ ತೀರ್ಮಾನ ತೆಗೆದುಕೊಂಡಿಲ್ಲ ಹೇಗೆ ಹೇಳುತ್ತೀರಿ ಎಂದು ಪ್ರಶ್ನೆ ಮಾಡಿತ್ತು.

nirbhaya convict mukesh

ಸಾಲಿಸಿಟರ್ ಜನರ್ ತುಷಾರ್ ಮೆಹ್ತಾ, ಮುಖೇಶ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯ ಜೊತೆಗೆ ಎಲ್ಲ ದಾಖಲೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗಿತ್ತು. ಯಾವ ದಾಖಲೆಗಳನ್ನು ನೋಡಬೇಕು ಎಂಬುವುದು ರಾಷ್ಟ್ರಪತಿಗಳ ವಿಶೇಷಾಧಿಕಾರ. ತಮ್ಮ ವಿಶೇಷಾಧಿಕಾರವನ್ನು ಬಳಸಿ ಕ್ಷಮಾದಾನದ ಅರ್ಜಿಯನ್ನು ವಜಾಗೊಳಿಸಿದ್ದಾರೆ ಎಂದು ವಾದ ಮಂಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *