– ಮಗನ ಬಗ್ಗೆ ಎಲ್ಲೂ ಹೇಳಿಕೊಳ್ತಿರಲಿಲ್ಲ
– ತಂದೆ-ತಾಯಿ ತುಂಬಾ ಒಳ್ಳೆಯವರು
ಉಡುಪಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉಡುಪಿ ಮೂಲದ ಆದಿತ್ಯ ರಾವ್ ಇಂದು ಬೆಂಗಳೂರಿನಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಸೈಲೆಂಟ್ ಕಿಲ್ಲರ್ ಆಗಿರುವ ಆದಿತ್ಯ ರಾವ್ ಹಿನ್ನೆಲೆ ಕೆದಕಿ ಹೋದಂತೆ ಹಲವಾರು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದವನಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಆದಿತ್ಯ ರಾವ್ ಅಕ್ಕಪಕ್ಕದ ಮನೆಯವರು ಆತನ ತಂದೆ-ತಾಯಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಆದರೆ ಆದಿತ್ಯ ರಾವ್ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಈ ಸಂಬಂಧ ಪಕ್ಕದ ಮನೆ ನಿವಾಸಿ ದಿವ್ಯ ಕಿಣಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಆದಿತ್ಯನ ಜೊತೆ ನಮಗೆ ಮಾತುಕತೆಯೇ ಇಲ್ಲ. ಆದರೆ ಆತನ ತಂದೆ-ತಾಯಿಯ ಜೊತೆ ಉತ್ತಮ ಒಡನಾಟವಿದೆ. ಆತನ ತಂದೆ-ತಾಯಿ ತುಂಬಾ ಒಳ್ಳೆಯವರು. ತಾಯಿ ಇರುವಾಗ ಅವರು ಯಾವತ್ತೂ ನಮ್ಮೊಂದಿಗೆ ಮಾತನಾಡುತ್ತಿದ್ದರು. ಆದರೆ ತಂದೆ ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ. ತುಂಬಾ ಸಾಧು ಸ್ವಭಾವದ ವ್ಯಕ್ತಿಯಾಗಿರುವ ಅವರು ತಮ್ಮಷ್ಟಕ್ಕೆ ತಾವು ಇರುತ್ತಿದ್ದು, ಯಾರೊಂದಿಗೂ ಬೆರೆಯುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್
ಅವರ ತಂದೆ ಕೆಲಸದಲ್ಲಿದ್ದಾಗ ಮನೆಯನ್ನು ಬಾಡಿಗೆ ಕೊಟ್ಟಿದ್ದರು. ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಅವರು ಇಲ್ಲಿ ಬಂದು ನೆಲೆಸಿರುವುದಾಗಿ ಆದಿತ್ಯ ರಾವ್ ತಾಯಿ ನಮ್ಮಲ್ಲಿ ಹೇಳುತ್ತಿದ್ದರು. ತಾಯಿಗೆ ಕ್ಯಾನ್ಸರ್ ಇದ್ದರೂ ಆದಿತ್ಯ ಮಾತ್ರ ಅವರ ಸಹಾಯಕ್ಕೆ ಬಂದಿರಲಿಲ್ಲ. ಈ ಕೊರಗು ಅವರಲ್ಲಿತ್ತು ಎಂದು ದಿವ್ಯ ಹೇಳುತ್ತಾರೆ. ಇದನ್ನೂ ಓದಿ: ನಾಲ್ಕು ಸಿಮ್ ಇಟ್ಕೊಂಡಿದ್ದ, ಲ್ಯಾಪ್ಟಾಪ್ ಕದ್ದಿದ್ದ – ಎಸಿ ಹಾಕ್ತಾರೆ ಎಂದು ಬ್ಯಾಂಕ್ ಕೆಲಸ ಬಿಟ್ಟ
ಆದಿತ್ಯ ರಾವ್ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ತಂದೆ-ತಾಯಿ ಕೂಡ ಮಗನ ಬಗ್ಗೆ ಏನೂ ಹೇಳುತ್ತಿರಲಿಲ್ಲ. ಆದಿತ್ಯ ತಾಯಿ ಮರಣದ ನಂತರ ನಮಗೂ ಅವರಿಗೂ ಸಂಪರ್ಕವೇ ಇಲ್ಲ. ಆದಿತ್ಯ ತಾಯಿಗೆ ಕ್ಯಾನ್ಸರ್ ಇತ್ತು. ಹೀಗಾಗಿ ಆರೋಗ್ಯದ ಬಗ್ಗೆ ಬೇಜಾರಾಗುತ್ತಿದ್ದರು. ಆದಿತ್ಯನಿಗೆ ತಮ್ಮ ಇದ್ದಾನೆ. ಅವನು ಕೂಡ ಒಳ್ಳೆಯವನಾಗಿದ್ದು, ಮದುವೆ ಆಗಿದೆ. ಆದರೆ ದೊಡ್ಡವನಾದ ಆದಿತ್ಯ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಬಾಂಬ್ ತಯಾರಿಸಲು ಉಗ್ರ ಸಂಘಟನೆಯ ಜೊತೆ ಸಂಪರ್ಕಕ್ಕೆ ಯತ್ನಿಸಿದ್ದ ಆದಿತ್ಯ ರಾವ್