ಡಿಸಿಎಂ ಹುದ್ದೆ ಕುರಿತು ಶಾಸಕರ ಸಹಿ ಸಂಗ್ರಹ ವಿಚಾರ- ರೇಣುಕಾಚಾರ್ಯಗೆ ಸಿಎಂ ಕ್ಲಾಸ್

Public TV
1 Min Read
M.P.Renukacharya BSY

ಬೆಂಗಳೂರು: ಡಿಸಿಎಂ ಹುದ್ದೆಗಳು ಬೇಕಾ ಬೇಡವಾ ಅನ್ನೋ ವಿಚಾರ ಬಿಜೆಪಿಯಲ್ಲಿ ಚರ್ಚೆಯ ಕೇಂದ್ರವಾಗಿಯೇ ಇನ್ನೂ ಗಿರಕಿ ಹೊಡೆಯುತ್ತಿದೆ. ಡಿಸಿಎಂ ಹುದ್ದೆಗಳು ಬೇಕಾ ಬೇಡವಾ ಅನ್ನೋ ವಿಚಾರ ಕುರಿತು ಶಾಸಕ ಎಂ.ಪಿ.ರೇಣುಕಾಚಾರ್ಯ ಪಕ್ಷದ ಶಾಸಕರಿಂದ ರಹಸ್ಯ ಸಹಿ ಸಂಗ್ರಹ ಕಾರ್ಯಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಈ ಕುರಿತು ಸಿಎಂ ಯಡಿಯೂರಪ್ಪಗೆ ಮಾಹಿತಿ ಕೊಡಲು ಬಂದಿದ್ದ ಶಾಸಕ ರೇಣುಕಾಚಾರ್ಯ ಸಿಎಂ ಸಿಟ್ಟಿಗೆ ಗುರಿಯಾದ ಪ್ರಸಂಗ ನಡೆಯಿತು ಎಂದು ಮೂಲಗಳು ತಿಳಿಸಿವೆ.

BJP DCM

ಇವತ್ತು ಬೆಳಗ್ಗೆ ಬೆಂಗಳೂರಿನ ಧವಳಗಿರಿ ನಿವಾಸಕ್ಕೆ ಆಗಮಿಸಿದ ರೇಣುಕಾಚಾರ್ಯ, ಮುಖ್ಯಮಂತ್ರಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದರು. ಇದೇ ವೇಳೆ ಡಿಸಿಎಂ ಹುದ್ದೆಗಳ ಕುರಿತು ಸಹಿ ಸಂಗ್ರಹ ವಿಚಾರವನ್ನೂ ರೇಣುಕಾಚಾರ್ಯ ಎತ್ತಿದ್ರಂತೆ. ಆಗ ಸಿಎಂ ರೇಣುಕಾಚಾರ್ಯ ಮೇಲೆ ಸಿಡುಕು ತೋರಿದರು ಎನ್ನಲಾಗಿದೆ. ಡಿಸಿಎಂ ಹುದ್ದೆ ಕುರಿತು ಬಹಿರಂಗ ಹೇಳಿಕೆ ಕೊಡುತ್ತಿರುವ ಹಿನ್ನೆಲೆಯಲ್ಲಿ ಶಾಸಕ ರೇಣುಕಾಚಾರ್ಯರಿಗೆ ಸಿಎಂ ಯಡಿಯೂರಪ್ಪ ಕ್ಲಾಸ್ ತಗೊಂಡ್ರು ಎಂದು ಹೇಳಲಾಗ್ತಿದೆ. ಡಿಸಿಎಂ ಹುದ್ದೆ ಬಗ್ಗೆ ಮಾತಾಡದಂತೆ ರೇಣುಕಾಚಾರ್ಯಗೆ ಸಿಎಂ ಸೂಚನೆ ಕೊಟ್ರಂತೆ. ಹೈಕಮಾಂಡ್ ಇದೆ, ಡಿಸಿಎಂ ಹುದ್ದೆಗಳ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೆ. ನೀನು ಯಾಕೆ ಬಹಿರಂಗ ಹೇಳಿಕೆ ಕೊಡ್ತಿದೀಯ? ಸಹಿ ಸಂಗ್ರಹ ಮಾಡ್ತೀದಿಯ ಅಂತೆಲ್ಲ ಮಾದ್ಯಮಗಳಲ್ಲಿ ವರದಿ ಬಂದಿದೆ. ಇದೆಲ್ಲ ಯಾಕೆ ಬೇಕು ನಿನಗೆ, ಸುಮ್ಮನಿರು ಎಂದು ರೇಣುಕಾಚಾರ್ಯಗೆ ಸಿಎಂ ಕ್ಲಾಸ್ ತೆಗೆದುಕೊಂಡರು ಎನ್ನಲಾಗಿದೆ.

renuka

ಇನ್ನು ಇದೇ ವೇಳೆ ಸಹಿ ಸಂಗ್ರಹ ಕುರಿತು ಡಿಸಿಎಂ ಲಕ್ಷ್ಮಣ ಸವದಿ ಸಹ ಮಾತಾಡಿದ್ರು. ಡಿಸಿಎಂ ಸ್ಥಾನದ ಬಗ್ಗೆ ಬಹಿರಂಗವಾಗಿ ನಾನು ಮಾತಾಡಲ್ಲ. ಇದು ಹಾದಿ ಬೀದಿಯಲ್ಲಿ ಚರ್ಚೆ ಮಾಡುವ ವಿಷಯ ಅಲ್ಲ. ಇಂಥ ವಿಷಯಗಳನ್ನು ಪಕ್ಷದ ಚೌಕಟ್ಟಿನಲ್ಲಿ ಮಾತಾಡ್ತೇನೆ ಅಂತ ಸವದಿ ಹೇಳಿದ್ರು. ರೇಣುಕಾಚಾರ್ಯ ಸಹಿ ಸಂಗ್ರಹ ಮಾಡುತ್ತಿರುವ ವಿಷಯ ನನಗೆ ಗೊತ್ತಿಲ್ಲ ಅಂದ ಲಕ್ಷ್ಮಣ ಸವದಿ, ಕಾಲಕಾಲಕ್ಕೆ ಏನಾಗ್ಬೇಕೋ ಅದಾಗುತ್ತೆ, ಕಾಲ ಬಂದಾಗ ನಾನು ಎಂಎಲ್‍ಸಿ ಆಗುತ್ತೇನೆ ಅಂತ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *