ಶ್ರೀನಗರ: ಉಗ್ರರ ಅಡಗುದಾಣಗಳ ಮೇಲೆ ಭದ್ರತಾ ಸಿಬ್ಬಂದಿ ದಾಳಿ ನಡೆಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದು, ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಜಮ್ಮು ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ಉಗ್ರರ ಅಡಗುದಾಣಗಳ ಮೇಲೆ ಸೈನಿಕರು ಹಾಗೂ ಸಿಆರ್ಪಿಎಫ್ ಜಂಟಿ ದಾಳಿ ನಡೆಸಿದ್ದು, ಶಸ್ತ್ರಾಸ್ತ್ರಗಳ ಜೊತೆಗೆ ಸ್ಯಾಟಲೈಟ್ ಫೋನುಗಳು ಹಾಗೂ ಇತರೆ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಉತ್ತರ ಕಾಶ್ಮೀರದ ರಾಡಿಯಾಬಾದ್ನ ಸೋಪುರ್ ಭಾಗದಲ್ಲಿ ಈ ಅಡುಗುದಾಣ ಪತ್ತೆಯಾಗಿದೆ.
ಈ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿ, ಸಂಪೂರ್ಣ ಆಟೋಮೆಟಿಕ್ ಎಕೆ ಬಂದೂಕುಗಳು, 2 ಸಾವಿರ ಸುತ್ತಿನ ಗುಂಡುಗಳು, ಮೂರು ರಾಕೆಟ್ ಪ್ರೊಪೆಲ್ಲರ್ ಗ್ರೆನೇಡ್(ಆರ್ಪಿಜಿ)ಗಳು, ಎರಡು ವೈರ್ಲೆಸ್ ಸೆಟ್ಗಳು ಹಾಗೂ ಸ್ಯಾಟಲೈಟ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು 32 ಆರ್ಆರ್(ರಾಷ್ಟ್ರೀಯ ರೈಫಲ್ಸ್), ವಿಶೇಷ ಕಾರ್ಯಾಚರಣೆ ತಂಡ(ಎಸ್ಓಜಿ) ಹಾಗೂ 92 ಸಿಆರ್ಪಿಎಫ್ ಬೆಟಾಲಿಯನ್ಗಳಿಂದ ಜಂಟಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.
ಈ ಕುರಿತು ಪ್ರಕರಣ ದಾಖಲಾಗಿದ್ದು, ಮದ್ದು, ಗುಂಡುಗಳು ಹಾಗೂ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಹರಿದ ಬಟ್ಟೆಗಳು ಹಾಗೂ ತುಕ್ಕು ಹಿಡಿದ ಶಸ್ತ್ರಾಸ್ತ್ರಗಳಾಗಿರುವುದರಿಂದ ಇದು ಹಳೆಯ ಅಡುಗುದಾಣವಿರಬಹುದು ಎಂದು ಅಂದಾಜಿಸಲಾಗಿದೆ.
ಪಾಕಿಸ್ತಾನ ಸತತ ಎರಡನೇ ದಿನವೂ ಕದನ ವಿರಾಮ ಉಲ್ಲಂಘಿಸಿದ ಕೆಲವೇ ಗಂಟೆಗಳ ನಂತರ ಈ ಕಾರ್ಯಾಚರಣೆ ನಡೆದಿದ್ದು, ಗಡಿ ನಿಯಂತ್ರಣ ರೇಖೆ(ಎಲ್ಓಸಿ) ಬಳಿಯ ಎರಡು ಪೋಸ್ಟ್ಗಳನ್ನು ಪಾಕಿಸ್ತಾನ ಗುರಿಯಾಗಿಸಿಕೊಂಡಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.