ನವದೆಹಲಿ: ಮುಂದಿನ ಆದೇಶದವರೆಗೂ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಮತ್ತು ತಾಯಿ ಗೌರಮ್ಮ ಅವರಿಗೆ ಸಮನ್ಸ್ ನೀಡದಂತೆ ಇಡಿ ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೆ ನಾಳೆ ನಡೆಯಬೇಕಿದ್ದ ವಿಚಾರಣೆಯಿಂದಲೂ ರಿಲೀಫ್ ಕೊಟ್ಟಿದೆ.
ಇಡಿ ಅಧಿಕಾರಿಗಳು ನೀಡಿದ್ದ ಸಮನ್ಸ್ ರದ್ದು ಮತ್ತು ಬೆಂಗಳೂರಿನಲ್ಲಿ ವಿಚಾರಣೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಇಂದು ವಿಚಾರಣೆ ನಡೆಸಿದ ಪೀಠ ಉಷಾ ಮತ್ತು ಗೌರಮ್ಮ ಪರ ವಕೀಲ ದಯಾನ್ ಕೃಷ್ಣನ್ ಅವರ ವಾದ ಕೇಳಿತು.
ಮಹಿಳೆಯರನ್ನು ಠಾಣೆಯಲ್ಲೇ ವಿಚಾರಣೆ ನಡೆಸಬೇಕು ಎಂಬ ಯಾವ ನಿಯಮಗಳಿಲ್ಲ. ಹಿಂದೆ ದೆಹಲಿ ಮದ್ರಾಸ್ ಹೈಕೋರ್ಟ್ ಸೇರಿ ಸುಪ್ರೀಂಕೋರ್ಟ್ ಹಲವು ಆದೇಶಗಳನ್ನು ನೀಡಿದೆ ಇದ್ಯಾವುದನ್ನು ಅರಿಯದೇ ಇಡಿ ಅಧಿಕಾರಿಗಳು ದೆಹಲಿಗೆ ಬರುವಂತೆ ಸಮನ್ಸ್ ನೀಡಿದ್ದಾರೆ. ಆದರೆ ಗೌರಮ್ಮ ಅವರಿಗೆ 85 ವರ್ಷ ಆಗಿದ್ದು ಆರೋಗ್ಯ ಸಹಕರಿಸಲ್ಲ ಅಲ್ಲದೇ ಉಷಾ ಅವರು ಗೃಹಿಣಿ ಆಗಿರುವುದರಿಂದ ಅವರ ಮನೆಯಲ್ಲಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.
ನಾವು ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಆದರೆ ದೆಹಲಿಯಲ್ಲಿ ವಿಚಾರಣೆ ಬೇಡ ಎನ್ನುತ್ತಿದ್ದೇವೆ ಬೆಂಗಳೂರಿನಲ್ಲಿ ವಿಚಾರಣೆ ಎದುರಿಸಲು ಸಿದ್ದವಾಗಿದ್ದೇವೆ ವಕೀಲರ ಸಮ್ಮುಖದಲ್ಲಿ ವಿಚಾರಣೆ ನಡೆಯಲಿ ಅಂತಾ ದಯಾನ್ ಕೃಷ್ಣನ್ ವಾದ ಮಂಡಿಸಿದ್ರು. ಇಡಿ ಪರ ಹಿರಿಯ ವಕೀಲರು ಗೈರಾದ ಹಿನ್ನಲೆ ವಾದ ಮಂಡನೆಗೆ ಅವಕಾಶ ಕೊಡಬೇಕು ಅಂತಾ ಜ್ಯೂನಿಯರ್ ವಕೀಲರು ಮನವಿ ಮಾಡಿದರು. ಇದನ್ನು ಕೇಳ್ತಿದ್ದಂತೆ ಮುಂದಿನ ದಿನಾಂಕದಂದು ವಾದ ಮಂಡಿಸದಿದ್ದಲ್ಲಿ ನಿಮ್ಮನ್ನ ಪರಿಗಣಿಸದೇ ತೀರ್ಪು ನೀಡುವುದಾಗಿ ಎಚ್ಚರಿಸಿ ನವೆಂಬರ್ 15 ಕ್ಕೆ ವಿಚಾರಣೆ ಮುಂದೂಡಿದರು.