ದಿಸ್ಪುರ್: ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಬಿಜೆಪಿ ಸಂಸದರೊಬ್ಬರು ವಿಲಕ್ಷಣ ಹೇಳಿಕೆ ನೀಡಿದ್ದು, ರಸ್ತೆಗಳು ಚೆನ್ನಾಗಿದ್ದರೆ ಅಪಘಾತಗಳು ಹೆಚ್ಚುತ್ತವೆ ಎಂದು ಹೇಳುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಅಸ್ಸಾಂ ಬಿಜೆಪಿ ಸಂಸದ ಪಲ್ಲಾಬ್ ಲೋಚನ್ ದಾಸ್ ಈ ಹೇಳಿಕೆ ನೀಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅಸ್ಸಾಂನ ತೇಜ್ಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಸ್ಸಾಂನಲ್ಲಿನ ಕಳಪೆ ರಸ್ತೆಗಳ ಪರಿಸ್ಥಿತಿ ಕುರಿತು ಉತ್ತರಿಸುವಾಗ ಈ ಸಂಸದರು ಹೇಳಿಕೆಯನ್ನು ನೀಡಿದ್ದಾರೆ. ಉತ್ತಮ ರಸ್ತೆಗಳನ್ನು ನಿರ್ಮಿಸುವುದರಿಂದ ಪ್ರಯೋಜನಗಳಿಗಿಂತ ಹೆಚ್ಚಾಗಿ, ಅಪಘಾತಗಳು ಹೆಚ್ಚು ಸಂಭವಿಸುತ್ತವೆ ಎಂದು ಹೇಳಿದ್ದಾರೆ.
ಈ ಹೇಳಿಕೆಯನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೆಟ್ಟ ರಸ್ತೆಗಳು ಅಪಘಾತಗಳನ್ನು ಕಡಿಮೆಗೊಳಿಸುತ್ತವೆ. ಹೀಗಾಗಿ ಉತ್ತಮ ರಸ್ತೆಗಳನ್ನು ನಿರ್ಮಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಕೆಟ್ಟ ರಸ್ತೆಗಳಲ್ಲಿ ಯುವಕರು ವಾಹನಗಳನ್ನು ನಿಧಾನವಾಗಿ ಚಲಾಯಿಸುತ್ತಾರೆ. ಇದರಿಂದ ರಾಜ್ಯದಲ್ಲಾಗುವ ಅಪಘಾತಗಳ ಸಂಖ್ಯೆ ಇಳಿಕೆಯಾಘುತ್ತದೆ. ಹೀಗಾಗಿ ಹೆಚ್ಚು ಉತ್ತಮ ರಸ್ತೆಗಳು ಇರಬಾರದು ಎಂಬ ಬಾಲಿಶ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೆ ಅಸ್ಸಾಂನ ಬಿಜೆಪಿ ಸರ್ಕಾರ ಉತ್ತಮ ರಸ್ತೆಗಳನ್ನು ನಿರ್ಮಿಸಿದೆ. ಹೀಗಾಗಿ ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿದೆ ಎಂದು ದಾಸ್ ಹೇಳಿದ್ದಾರೆ.