ಭೋಪಾಲ್: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಇಬ್ಬರು ವ್ಯಕ್ತಿಗಳಿಗೆ ಮಧ್ಯಪ್ರದೇಶದ ಇಂದೋರ್ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಬಸ್ಕಿ ಹೊಡೆಸಿದ್ದಾರೆ.
ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಆಟೋ ಚಾಲಕ ಹಾಗೂ ಪ್ರಯಾಣಿಕನಿಗೆ ಅಧಿಕಾರಿ ಬಸ್ಕಿ ಹೊಡೆಸಿದ್ದಾರೆ. ಸಿಕ್ಕಿಬಿದ್ದ ತಕ್ಷಣ ಅಧಿಕಾರಿ ದಂಡ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಇಬ್ಬರೂ ತಮ್ಮ ಬಳಿ ಹಣವಿಲ್ಲ ಎಂದು ಹೇಳಿದ್ದಾರೆ. ಆಗ ಅಧಿಕಾರಿ ಹಾಗೂ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.
ಅಧಿಕಾರಿಯ ಮುಂದೆ ಇಬ್ಬರೂ ಬಸ್ಕಿ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ರವಿ ಎಂದು ಗುರುತಿಸಲಾಗಿದೆ. ಆಟೋ ರೈಲ್ವೇ ನಿಲ್ದಾಣದಿಂದ ಬರುತ್ತಿತ್ತು.
ಐಎಂಸಿ ಮುಖ್ಯ ನೈರ್ಮಲ್ಯ ಅಧಿಕಾರಿ(ವಲಯ-1) ಶೈಲೇಂದ್ರ ಪಾಲ್ ಅವರ ಪ್ರಕಾರ, ಆಟೋ ಪ್ರಯಾಣಿಕ ರವಿ ಹಾಗೂ ಚಾಲಕ ಇಬ್ಬರೂ ಮಾರಿಮಾತಾ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದನ್ನು ಕಂಡು ಅಧಿಕಾರಿ ಇಬ್ಬರನ್ನೂ ಪ್ರಶ್ನಿಸಿದ್ದಾರೆ.
ಅಧಿಕಾರಿ ಇಬ್ಬರಿಗೆ ತಲಾ 250 ರೂ. ದಂಡ ಪಾವತಿಸುವಂತೆ ಕೇಳಿದ್ದಾರೆ. ಆಟೋ ಚಾಲಕ ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಾನೆ. ಪ್ರಯಾಣಿಕ ರವಿ ತನ್ನ ಬಳಿ ಕೇವಲ 100 ರೂ. ಇರುವುದಾಗಿ ಹೇಳಿದ್ದಾನೆ. ಆಗ ಅಧಿಕಾರಿ 100 ರೂ. ಪಡೆದು, ಇಬ್ಬರೂ ಸಹ ಬಸ್ಕಿ ಹೊಡೆಯುವಂತೆ ಸೂಚಿಸಿದ್ದಾರೆ. ಈ ರೀತಿ ಶಿಕ್ಷೆ ನೀಡಿದರೆ ಇಬ್ಬರೂ ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದು ಶೈಲೇಂದ್ರ ಪಾಲ್ ಹೇಳಿದ್ದಾರೆ.