– ಬಿಎಸ್ವೈ, ಹೆಚ್ಡಿಕೆ ಜಾತಿ ರಾಜಕಾರಣ ಮಾಡಲ್ಲ
ಬೆಳಗಾವಿ: ಈಗ ಇರುವುದು ಹಳೇ ಕಾಂಗ್ರೆಸ್ ಅಲ್ಲ, ಇಟಾಲಿಯನ್ ಕಾಂಗ್ರೆಸ್ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರು ಸ್ನೇಹಿತರು ಅಲ್ಲ, ಯಾರು ವೈರಿಗಳು ಅಲ್ಲ. ಈಗ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿರಬಹುದು. ಆದರೆ ಒಂದು ಕಾಲದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿ ಲೀಡರ್ ಆದವರು ಎಂದದರು.
ಆಗ ಮಹಾತ್ಮ ಗಾಂಧೀಜಿ ಅವರ ಕಾಂಗ್ರೆಸ್ ನ್ನ ಸಿದ್ದರಾಮಯ್ಯ ಟೀಕೆ ಮಾಡುತ್ತಿದ್ದರು. ನಂತರ ಅವರು ಸೇರಿದ್ದು ಸೋನಿಯಾ ಗಾಂಧಿ ಅವರ ಇಟಾಲಿಯನ್ ಕಾಂಗ್ರೆಸ್ಗೆ. ಸಿದ್ದರಾಮಯ್ಯ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಿ. ಇವತ್ತಿನ ಕಾಂಗ್ರೆಸ್ ನಿಜವಾದ ಕಾಂಗ್ರೆಸ್ ಅಲ್ಲ. ಹಳೆ ಕಾಂಗ್ರೆಸ್ನಲ್ಲಿರುವವರ ತ್ಯಾಗ ಬಲಿದಾನದ ವಿಚಾರ ಮಾಡಿದಾಗ ಈಗಿನ ಪಕ್ಷ ಕೇವಲ ಇಟಾಲಿಯನ್ ಕಾಂಗ್ರೆಸ್ ಎಂದು ಅಂಗಡಿ ಟೀಕೆ ಮಾಡಿದ್ದಾರೆ.
ಸಿಎಂ ಯಡಿಯೂರಪ್ಪ, ಕುಮಾರಸ್ವಾಮಿ ಮತ್ತು ನಾನಾಗಿರಬಹುದು ನಾವ್ಯಾರು ಜಾತಿ ರಾಜಕಾರಣಿಗಳಲ್ಲ. ಕೆಲವೊಬ್ಬರು ಜಾತಿ ಬಳಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಜನ ಬುದ್ದಿವಂತರಾಗಿದ್ದಾರೆ ಜಾತಿ ನೋಡಿ ಯಾರು ಮರಳಾಗುತ್ತಿಲ್ಲ. ಜಾತಿ ಅನ್ನುವುದು ಹೋಗಿ ದೇಶ ಮೊದಲು ಅಂತಿದ್ದಾರೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.