ಬೆಂಗಳೂರು: ಮದ್ಯ ಚಟಕ್ಕೆ ಬಿದ್ದು ಹಣಕ್ಕಾಗಿ ಕಳ್ಳತನ ಮಾಡುತ್ತಿದ್ದ ಟೆಕ್ಕಿಯೊಬ್ಬನನ್ನು ನಗರದ ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
ಕರುಣಾಕರಣ್ ಕಾರ್ತಿಕ್ ಅಲಿಯಾಸ್ ಕರ್ಣ ಬಂಧಿತ ಆರೋಪಿ. ಬಂಧಿತನಿಂದ ಮೊಬೈಲ್ ಟವರ್ ಕಂಬಗಳಿಗೆ ಅಳವಡಿಸುವ ಸುಮಾರು 3 ಲಕ್ಷ ರೂ. ಮೌಲ್ಯದ ಎಸ್ಎಫ್ಪಿ ಹಾಗೂ ರೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಿಪ್ಲೊಮಾ ಮಾಡಿದ್ದ ಕರುಣಾಕರಣ್ ಪ್ರತಿಷ್ಠಿತ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಕಾರಣಾಂತರಗಳಿಂದ ಕೆಲಸ ಬಿಟ್ಟು ಕಳೆದ ಒಂದೂವರೆ ತಿಂಗಳಿನಿಂದ ಮನೆಯಲ್ಲೇ ಇದ್ದ. ಮದ್ಯದ ಚಟಕ್ಕೆ ಬಿದ್ದಿದ್ದ ಕರುಣಾಕರ್ ಎಣ್ಣೆ ಖರೀದಿಸಲು ಕಳ್ಳತನ ಮಾಡುತ್ತಿದ್ದರು. ಕರುಣಾಕರಣ್ ಹೆಚ್ಚಾಗಿ ಟವರ್ ಕಂಬಗಳಿಗೆ ಅಳವಡಿಸುವ ಎಸ್ಎಫ್ಪಿ ಹಾಗೂ ರೂಟರ್ ಗಳನ್ನು ಕಳ್ಳತನ ಮಾಡುತ್ತಿದ್ದ.
ಕರುಣಾಕರಣ್ ಕಳ್ಳತನ ಮಾಡುತ್ತಿದ್ದ ವಸ್ತುಗಳನ್ನು ಗುಜರಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ. ಕೆಲವೊಂದು ವಸ್ತುಗಳನ್ನು ಓಎಲ್ಎಕ್ಸ್ ನಲ್ಲೂ ಪೋಸ್ಟ್ ಮಾಡಿ ಮಾರುತ್ತಿದ್ದ. ಈ ಸಂಬಂಧ ಆರೋಪಿಯ ವಿರುದ್ಧ ಹೊಸಕೋಟೆ, ರಾಮಮೂರ್ತಿನಗರ, ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದವು. ಆತನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಸೂಕ್ತ ಮಾಹಿತಿ ಆಧಾರದ ಮೇಲೆ ಬಂಧಿಸಿದ್ದಾರೆ.