ಉಡುಪಿ: ಕುಂದಾಪುರದ ವಾಜಪೇಯಿ ಖ್ಯಾತಿಯ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯ ಸಚಿವ ಸ್ಥಾನ ಕೈತಪ್ಪಿದೆ. ಸತತ ಐದು ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಈ ಬಾರಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇವತ್ತು ಸಚಿವರ ಪಟ್ಟಿಯಲ್ಲಿ ಹಾಲಾಡಿ ಹೆಸರು ಕಳೆದ ಬಾರಿಯಂತೆ ಈ ಬಾರಿಯೂ ಮಿಸ್ಸಾಗಿದೆ.
ಸಚಿವ ಸ್ಥಾನ ಕೈತಪ್ಪಿದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಹಾಲಾಡಿ, ಪ್ರಮಾಣವಚನಕ್ಕೆ ನನಗೆ ಆಹ್ವಾನ ಇರಲಿಲ್ಲ. ಲಾಬಿ ಮಾಡಿ ಸಚಿವ ಸ್ಥಾನ ಪಡೆಯೋದು ಗೊತ್ತಿಲ್ಲ. ಗುಂಪುಗಾರಿಕೆ, ವಾಮಮಾರ್ಗ ಮಾಡಲ್ಲ. ಜಾತಿ ರಾಜಕಾರಣ ಮಾಡಿ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಹಾಲಾಡಿಯವರ ಈ ಹೇಳಿಕೆ ನೂತನ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಟಾಂಗ್ ಕೊಟ್ಟಂತಿತ್ತು.
ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವಿಗೆ ಶ್ರಮಿಸಿದ್ದೇನೆ. ಬಿಜೆಪಿಗೆ ಪಕ್ಷನಿಷ್ಠೆ ತೋರಿದ್ದೇನೆ. ಒಂದು ಅವಧಿ ಪಕ್ಷೇತರನಾಗಿದ್ದಾಗ ಬಿಜೆಪಿ ಬೆಂಬಲಿಸಿದ್ದೇನೆ. ಪಕ್ಷೇತರನಾಗಿ ಗೆದ್ದಾಗ ಜಿಲ್ಲಾ ಪಂಚಾಯತ್, ಗ್ರಾಮ, ತಾಲೂಕು ಪಂಚಾಯತ್ ಸದಸ್ಯರೆಲ್ಲರೂ ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದು ಹೇಳಿದರು. ಸಚಿವ ಸ್ಥಾನ ಯಾಕೆ ಸಿಗಲಿಲ್ಲವೆಂದು ನನಗೆ ಗೊತ್ತಿಲ್ಲ. ಮಾಧ್ಯಮದವರು ಬಿಜೆಪಿಯ ಪ್ರಮುಖರನ್ನೇ ಕೇಳಿ ತಮ್ಮ ಅಸಮಧಾನವನ್ನು ಹೊರ ಹಾಕಿದರು.
ಸಚಿವ ಸ್ಥಾನ ವಂಚಿತರು ಸಭೆಗೆ ಕರೆದಿದ್ದರು. ಬೆಂಗಳೂರಿಗೆ ನನ್ನನ್ನು ಸಭೆಗೆ ಬರುವಂತೆ ಕರೆ ಮಾಡಿದ್ದರು. ನಾನು ಎಲ್ಲೂ ಹೋಗಿಲ್ಲ, ಕ್ಷೇತ್ರದಲ್ಲೇ ಇದ್ದೇನೆ ಎಂದು ಹೇಳಿದರು.
ಸಿಎಂ ಬಿಎಸ್ ಯಡಿಯೂರಪ್ಪ ಆಪ್ತರಾಗಿರುವ ಹಾಲಾಡಿಯನ್ನು, ಮನನೊಂದು ಪಕ್ಷೇತರನಾಗಿದ್ದಾಗ ಯಡಿಯೂರಪ್ಪನವರೇ ಬಿಜೆಪಿಗೆ ಮತ್ತೆ ಕರೆತಂದು ಟಿಕೆಟ್ ಕೊಟ್ಟಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ ಸಮುದಾಯದ ಪ್ರಭಾವಿ ನಾಯಕನಾಗಿರುವ ಹಾಲಾಡಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸದ ಹಾಲಾಡಿ, ಕಾರ್ಯಕರ್ತರ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.