ದೆಹಲಿ: ಇನ್ನುಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಜೆಡಿಎಸ್ ಉಚ್ಛಾಟಿತ, ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.
ಜೆಡಿಎಸ್ನಿಂದ ಉಚ್ಛಾಟನೆ ಮಾಡಿದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಪಂಚ ವಿಶಾಲವಾಗಿದೆ. ಅತೃಪ್ತ ಶಾಸಕರೇ ಸೇರಿ ಒಂದು ಪಕ್ಷವನ್ನು ಕಟ್ಟಿದರೆ ಆಗುತ್ತೆ ಬಿಡಿ. ಹೊಸ ಪಕ್ಷ ಕಟ್ಟಬೇಕಿದೆ. ನಾನು ಚುನಾವಣೆಯಿಂದ ದೂರ ಉಳಿಯಲು ನಿರ್ಧಸಿದ್ದೇನೆ. ಆದರೆ ಇದು ರಾಜಕೀಯ ನಿವೃತ್ತಿಯಲ್ಲ ಎಂದು ನಗೆ ಬೀರಿದರು.
ಬಿಜೆಪಿ ಸೇರುವ ವಿಚಾರವನ್ನು ಮಾಡಿಲ್ಲ. ಬಿ.ಎಸ್.ಯಡಿಯೂರಪ್ಪನವರು ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿದ್ದರೆ ಅವರನ್ನೇ ಪ್ರಶ್ನಿಸಬೇಕು. ನನಗೆ ಯಾಕೆ ಪ್ರಶ್ನೆ ಮಾಡುತ್ತೀರಾ? ನಾನು ಬಿಜೆಪಿ ಸೇರುವ ಬಗ್ಗೆ ವಿಚಾರ ಮಾಡಿಲ್ಲ. ಹುಣಸೂರು ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಯಾರನ್ನು ನಿಲ್ಲಿಸುತ್ತೋ ನನಗೂ ಗೊತ್ತಿಲ್ಲ ಎಂದು ಹೇಳಿದರು.
ರಾಜ್ಯಪಾಲರನ್ನಾಗಿ ಮಾಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ ಎಂದು ಮಾಧ್ಯಮಗಳು ಕೇಳಿದ್ದಕ್ಕೆ ನಗುತ್ತಲೇ ಉತ್ತರ ನೀಡಿದ ಎಚ್.ವಿಶ್ವನಾಥ್, ನನಗೆ ಇನ್ನು ಅಷ್ಟು ವಯಸ್ಸಾಗಿಲ್ಲ. ಸುಪ್ರೀಂಕೋರ್ಟ್ ನಲ್ಲಿ ನಮ್ಮ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ಮಾತನಾಡಲು ಹಿರಿಯ ವಕೀಲ ಮುಕುಲ್ ರೋಹಟಗಿ ಅವರ ಬಳಿಗೆ ಬಂದಿದ್ದೇನೆ ಅಷ್ಟೇ. ಅತೃಪ್ತರಲ್ಲಿ ಯಾವುದೇ ಬಣಗಳಿಲ್ಲ ಎಂದು ಹೇಳಿದರು.
ಎಚ್.ವಿಶ್ವನಾಥ್ ಅವರು ಚುನಾವಣಾ ಕಣದಿಂದ ಹಿಂದೆ ಸರಿಯುವ ಮೂಲಕ ಬಿಜೆಪಿಗೆ ಅನುಕೂಲ ಮಾಡಿಕೊಟ್ಟರಾ? ಸಿ.ಪಿ.ಯೋಗೇಶ್ವರ್ ಅವರಿಗೆ ಅನುಕೂಲ ಮಾಡಿಕೊಟ್ಟರಾ ಎಂಬ ಪ್ರಶ್ನೆ ಭಾರೀ ಚರ್ಚೆಯಾಗುತ್ತಿದೆ. ರಾಜ್ಯ ರಾಜಕಾರಣದಲ್ಲಿಯೇ ಇರಬೇಕು ಎಂಬ ದೃಢ ನಿರ್ಧಾರ ಹೊಂದಿದ್ದ ಸಿ.ಎಸ್.ಯೋಗೇಶ್ವರ್ ಅವರು ಲೋಕಸಭಾ ಚುನಾವಣೆ ಕಣದಿಂದ ದೂರ ಉಳಿದಿದ್ದರು. ಆದರೆ ಈಗ ಎಚ್.ವಿಶ್ವನಾಥ್ ಅವರ ರಾಜೀನಾಮೆಯಿಂದ ತೆರವಾದ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ, ವಿಧಾನಸಭೆ ಪ್ರವೇಶಿಸಲು ಯೋಗೇಶ್ವರ್ ಭರ್ಜರಿ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.