ಶ್ರೀನಗರ: ಭಾರತೀಯ ಸೇನೆ ಅನಂತ್ನಾಗ್ನ ಬಿಜ್ಬೆಹರಾ ಪ್ರದೇಶದಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಜೈಷ್-ಇ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರು ಹತರಾಗಿದ್ದಾರೆ.
ಘಟನೆ ಕುರಿತು ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದು, ಜೈಷ್-ಇ-ಮೊಹಮ್ಮದ್ ಸಂಘಟನೆಯ ಫಯಾಜ್ ಪಂಝೂ ಹಾಗೂ ಆತನ ಸಹಚರ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿ ವೇಳೆ ಹತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಂಝೂ ಜೈಷ್ ಸಂಘಟನೆಯ ಉನ್ನತ ಕಮಾಂಡರ್ ಆಗಿದ್ದು, ಪದೇ ಪದೆ ಸಿಆರ್ಪಿಎಫ್ ಯೋಧರ ಮೇಲೆ ದಾಳಿ ನಡೆಸುತ್ತಿದ್ದ. ಈ ಮೂಲಕ ಯೋಧರ ಮೇಲೆ ದಾಳಿ ನಡೆಸುವದನ್ನೇ ಕೆಲಸವನ್ನಾಗಿ ಮಾಡಿಕೊಂಡಿದ್ದ. ಜೂನ್ 12 ರಂದು ಅನಂತ್ನಾಗ್ ನಗರದ ಬಳಿ ಸಿಆರ್ಪಿಎಫ್ ಯೋಧರ ಮೇಲೆ ದಾಳಿ ನಡೆಸಿ 5 ಸಿಆರ್ಪಿಎಫ್ ಯೋಧರನ್ನು ಹತ್ಯೆಗೈದಿದ್ದ. ಅಲ್ಲದೆ, ಇದೇ ಸಂದರ್ಭದಲ್ಲಿ ಯೋಧ ಶೋ ಅರ್ಷದ್ ಖಾನ್ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಸೈನಿಕರ ಮೇಲೆ ಪದೆ ಪದೇ ದಾಳಿ ನಡೆಸುತ್ತಿದ್ದ ಈ ಇಬ್ಬರನ್ನು ಇಂದು ನಡೆದ ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.