ಹೈದರಾಬಾದ್: ತಮ್ಮ ಮನೆಯಿಂದ ನಾಪತ್ತೆಯಾಗಿದ್ದ ಇಬ್ಬರು ಅಪ್ರಾಪ್ತ ಬಾಲಕರು ಎರಡು ದಿನಗಳ ನಂತರ ಮೈಲಾರ್ದೇವ್ಪಲ್ಲಿಯ ಶಾಸ್ತ್ರಿಪುರಂ ಎಂಬ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ರಫಿಯುದ್ದೀನ್ ಹರುನ್ (9) ಮತ್ತು ಮೊಹಮ್ಮದ್ ಯೂಸುಫ್ (12) ಮೃತ ಬಾಲಕರು. ಇಬ್ಬರು ಕಲಾಪಥಾರ್ ನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ಇಬ್ಬರು ಬಾಲಕರು ಗುರುವಾರ ಸಂಜೆ ಸುಮಾರು 4 ಗಂಟೆಗೆ ಶಾಲೆಯಿಂದ ಬಂದು ನಂತರ ಮನೆಯಿಂದ ಹೊರಗಡೆ ಹೋಗಿದ್ದಾರೆ.
ಸಂಜೆಯಾದರೂ ಇಬ್ಬರು ಮನೆಗೆ ಹಿಂದಿರುಗಲಿಲ್ಲ. ಇದರಿಂದ ಗಾಬರಿಗೊಂಡು ಪೋಷಕರು ಎಲ್ಲ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಮೈಲಾರ್ದೇವ್ಪಲ್ಲಿ ಪೊಲೀಸ್ ಠಾಣೆಗೆ ಹೋಗಿ ಶುಕ್ರವಾರ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ಪೊಲೀಸರು ಬಾಲಕರಿಗಾಗಿ ಹುಡುಕಾಟ ಆರಂಭಿಸಿದ್ದರು.
ಇಬ್ಬರು ಹುಡುಗರ ಶವಗಳು ಬಮ್ರೌಕ್ಡೌಲ್ಲಾ ಕೆರೆಯಲ್ಲಿ ತೇಲುತ್ತಿವೆ ಎಂದು ಪೊಲೀಸರಿಗೆ ಮಾಹಿತಿ ಬಂದಿದೆ. ಕೂಡಲೇ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ನಂತರ ಬಾಲಕರ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೋಷಕರು ಬಂದು ಅವರನ್ನು ತಮ್ಮ ಮಕ್ಕಳೆಂದು ದೃಢಪಡಿಸಿದರು. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮೇನಿಯಾ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಬಾಲಕರು ಈಜಲು ಅಥವಾ ಆಟವಾಡಲು ಕೆರೆಗೆ ಇಳಿದಿದ್ದಾರೆ. ಆಗ ಆಕಸ್ಮಿಕವಾಗಿ ಮುಳುಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಕ್ಕೆ ಇದು ಆಕಸ್ಮಿಕವೋ ಅಥವಾ ಅವರ ಸಾವಿನಲ್ಲಿ ಹಿಂದೆ ಬೇರೆ ಏನಾದರೂ ಕಾರಣ ಇದಿಯಾ ಎಂದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.