ಕೊಡಗು: ಜಿಲ್ಲೆಯಲ್ಲಿ ಪುಂಡಾನೆ ಉಪಟಳ ಮುಂದುವರಿದಿದ್ದು, ಒಂಟಿ ಸಲಗ ದಾಳಿಗೆ ಕಾರ್ಮಿಕ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ವಾಲ್ನೂರಿನಲ್ಲಿ ನಡೆದಿದೆ.
ಕಲಾವತಿ (55) ಕಾಡಾನೆ ದಾಳಿಗೊಳಗಾದ ಕೂಲಿ ಕಾರ್ಮಿಕ ಮಹಿಳೆ. ಕೂಲಿ ಕೆಲಸಕ್ಕೆ ತೆರಳುವಾಗ ಬೆಳಗ್ಗೆ 7:30ರ ಸುಮಾರಿಗೆ ವಾಲ್ನೂರು ಬಸವೇಶ್ವರ ದೇವಾಲಯ ಬಳಿ ಒಂಟಿ ಸಲಗ ಮಹಿಳೆಯ ಮೇಲೆ ದಾಳಿ ನಡೆಸಿದೆ.
ಕಾಡಾನೆ ದಾಳಿಯಿಂದ ಮಹಿಳೆಯ ತಲೆ, ಕೈ ಕಾಲಿಗೆ ಗಂಭೀರ ಗಾಯವಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದ್ಯ ಕಾರ್ಮಿಕ ಮಹಿಳೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಅಥವಾ ಮಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಡಾನೆ ಉಪಟಳ ತಡೆಗೆ ಗ್ರಾಮಸ್ಥರ ಆಗ್ರಹಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.