ಮಡಿಕೇರಿ: ಈಜಲು ಹೋಗಿದ್ದ ಅಳಿಯ ಹಾಗೂ ಮಾವ ನೀರುಪಾಲಾದ ಘಟನೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಆರ್ಎಂಸಿ ಬಳಿಯ ಕಾವೇರಿ ನದಿಯಲ್ಲಿ ನಡೆದಿದೆ.
ಕುಶಾಲನಗರದ ಬದ್ರುನ್ನಿಸಾ ಲೇಔಟ್ ನಿವಾಸಿ ನಾಸಿರ್ ಖಾನ್ (44) ಹಾಗೂ ಅಕ್ಕನ ಮಗ, ಅಳಿಯ ಸೈಯ್ಯದ್ ಮೋಹಿನ್ (14) ಮೃತ ದುರ್ದೈವಿಗಳು. ನೀರಿನಲ್ಲಿ ಮುಳುಗುತ್ತಿದ್ದ ಅಳಿಯನನ್ನು ರಕ್ಷಿಸಲು ಹೋಗಿ ನಾಸಿರ್ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಕಾವೇರಿ ಪಾಲು
ರಂಜಾನ್ ಹಬ್ಬಕ್ಕೆಂದು ನಾಸಿರ್ ಖಾನ್ ಅವರ ಮನೆಗೆ ಬೆಂಗಳೂರಿನಿಂದ ಸೈಯ್ಯದ್ ಮೋಹಿನ್ ಬಂದಿದ್ದ. ಕುಟುಂಬದವರ ಜೊತೆಗೆ ಸೈಯ್ಯದ್ ಮೋಹಿನ್ ಕೂಡ ಇಂದು ಕಾವೇರಿ ನದಿಗೆ ಹೋಗಿದ್ದ. ದಂಡೆಯ ಮೇಲೆ ನಿಂತಿದ್ದ ಸೈಯ್ಯದ್ ಕಾಲು ಜಾರಿ ಕಾವೇರಿ ನದಿಗೆ ಬಿದ್ದಿದ್ದಾನೆ. ಇದನ್ನು ನೋಡಿದ ನಾಸಿರ್ ತಕ್ಷಣವೇ ನದಿಗೆ ಹಾರಿ ಅಳಿಯನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ನಾಸಿರ್ ಕೂಡ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಹಾಗೂ ಮುಳುಗುತಜ್ಞ ರಾಮಕೃಷ್ಣ ಅವರು ಮೃತದೇಹಗಳನ್ನು ಮೇಲೆತ್ತಿದ್ದಾರೆ. ಬಳಿಕ ನಾಸಿರ್ ಹಾಗೂ ಸೈಯ್ಯದ್ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.