ಉಡುಪಿ/ಚಿಕ್ಕಮಗಳೂರು: ಸಂಸದೆ ಶೋಭಾ ಕರಂದ್ಲಾಜೆ ಅವರು 2,58,695 ಮತ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಎರಡನೇ ಬಾರಿ ಸಂಸತ್ ಪ್ರವೇಶಿಸಿದ್ದಾರೆ.
ಕರಂದ್ಲಾಜೆ 5,32,504 ಮತಗಳನ್ನು ಪಡೆದರೆ, ಜೆಡಿಎಸ್ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ 2,73,809 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಶೋಭಾ ಗೆದ್ದಿದ್ದು ಹೇಗೆ?
ಸಂಸದೆ, ಹಿಂದುತ್ವದ ಕಮಿಟೆಡ್ ಕಾರ್ಯಕರ್ತೆ ಹಾಗೂ ಹಿಂದುತ್ವಕ್ಕೆ ಕಟಿಬದ್ಧ, ದತ್ತ ಜಯಂತಿಯಲ್ಲಿ ಪ್ರತಿ ವರ್ಷವೂ ಪಾಲ್ಗೊಂಡು ದತ್ತಪೀಠದ ಮುಕ್ತಿಗಾಗಿ ಹೋರಾಡಿದ್ದಾರೆ. ಶೋಭಾ ರಾಜ್ಯಮಟ್ಟದ ನಾಯಕಿ ಆಗಿದ್ದು, ಎಂತಹಾ ಸಂದರ್ಭದಲ್ಲೂ ಪಕ್ಷವನ್ನು ಸಮರ್ಥಿಸಿಕೊಳ್ಳುವ ಫೈರ್ ಬ್ರ್ಯಾಂಡ್ ಲೇಡಿ ಎಂದು ಎನ್ನಿಸಿಕೊಂಡಿದ್ದಾರೆ. ಶೋಭಾ ಅವರು ಯಡಿಯೂರಪ್ಪನವರ ಆಪ್ತೆಯಾಗಿದ್ದು, ಜಿಲ್ಲೆಯ ಐದು ಶಾಸಕರಲ್ಲಿ ನಾಲ್ವರು ಬಿಎಸ್ವೈ ಬೆಂಬಲಿಗರಾಗಿದ್ದು, ಅವರೆಲ್ಲಾ ಶೋಭಾ ಬೆನ್ನಿಗೆ ನಿಂತಿದ್ದರು.
ಶೋಭಾ ಜಾತಿಯಲ್ಲಿ ಒಕ್ಕಲಿಗರಾದದ್ದು ಪ್ಲೈಸ್ ಪಾಯಿಂಟ್ ಆಗಿದ್ದು, ಕಾಫಿನಾಡಿನ ಮಲೆನಾಡು ಭಾಗದಲ್ಲಿ ಒಕ್ಕಲಿಗರೇ ನಿರ್ಣಾಯಕರಾಗಿದ್ದರು.
We won Mangaluru & Chikmagalur ✌????
Bring it on
— BJP Karnataka (@BJP4Karnataka) May 23, 2019
ಪ್ರಮೋದ್ ಸೋತಿದ್ದು ಯಾಕೆ?
ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ನಿಂದ ಸ್ಪರ್ಧಿಸಿದಾಗಲೇ ಅರ್ಧ ಸೋಲು ಕಂಡಿದ್ದರು. ಉಡುಪಿ-ಚಿಕ್ಕಮಗಳೂರಿನ 9 ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ಕ್ಷೇತ್ರದಲ್ಲೂ ಜೆಡಿಎಸ್ ಇಲ್ಲ. ಅಲ್ಲದೆ ಜಾತಿ ರಾಜಕಾರಣದಲ್ಲೂ ಕಾಫಿನಾಡಲ್ಲಿ ಪ್ರಮೋದ್ಗೆ ಜಾತಿ ಮತಗಳು ಇಲ್ಲ. ಪಕ್ಕಾ ಹಿಂದುತ್ವದ ಜಿಲ್ಲೆಯಾಗಿರುವ ಚಿಕ್ಕಮಗಳೂರಿನಲ್ಲಿ ಮೋದಿ ಅಲೆ ಇದೆ. ‘ಗೋ ಬ್ಯಾಕ್ ಶೋಭ’ ಅಭಿಯಾನ ನಡೆಸಿದವರೇ ಮೋದಿಗಾಗಿ ಶೋಭಾ ಬೆನ್ನಿಗೆ ನಿಂತಿದ್ದರು.
ಅವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಉಸಿರಾಡುತ್ತಿದೆ. ಆದರೆ ಅಸ್ತಿತ್ವವೇ ಇಲ್ಲದ ಜೆಡಿಎಸ್ನಿಂದ ಸ್ಪರ್ಧಿಸಿದ್ದು ದೊಡ್ಡ ನಷ್ಟವಾಗಿದೆ. ಪಕ್ಷ ಬದಲಾವಣೆ ಮಾಡುವುದರ ಜೊತೆ ಜೆಡಿಎಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿರಲಿಲ್ಲ. ಅಲ್ಲದೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಹೊಂದಾಣಿಕೆ ಇರಲಿಲ್ಲ.