ಮೈಸೂರು: ಮಾಧ್ಯಮಗಳ ಮೇಲೆ ನಿಯಂತ್ರಣ ಕಾಯ್ದೆ ತರಬೇಕು ಎನ್ನುವ ಸಿಎಂ ಕುಮಾರಸ್ವಾಮಿ ಅವರ ಮಾತಿಗೆ ನಮ್ಮ ಸಹಮತ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಧ್ಯಮದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಮಾಧ್ಯಮದವರು ಬರೆದು ತೋರಿಸಬೇಕು, ಮಾಧ್ಯಮದಲ್ಲಿ ವಾರಕ್ಕೆ ಒಬ್ಬರು ಜೈಲಿಗೆ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಾಧ್ಯಮಗಳ ಮೇಲೆ ನಿಯಂತ್ರಣ ಕಾಯ್ದೆ ತರಬೇಕು ಎಂಬ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರ ಪ್ರಸ್ತಾಪಿಸಿದ ವಿಶ್ವನಾಥ್, ಸಿಎಂ ಮಾತಿಗೆ ನಮ್ಮ ಸಹಮತ ಇದೆ. ಅವರು ಹೇಳಿದ್ದು ಮಾಧ್ಯಮಕ್ಕೆ ಸಂಪೂರ್ಣ ನಿಯಂತ್ರಣ ಅಲ್ಲ. ಮಾಧ್ಯಮಗಳ ಕೆಲವು ಕಾರ್ಯಕ್ರಮಗಳು ನಿಯಂತ್ರಣವಾಗಬೇಕಿದೆ. ರಾಜಕಾರಣಿಗಳನ್ನು ಬಫೂನ್ ರೀತಿ ತೋರಿಸಿ ನಗೆ ಪಾಟಲಿಗೆ ಇಡುಮಾಡಿ ಮುಜುಗರ ತರುತ್ತಾರೆ. ಇದು ಅಷ್ಟು ಸಮಂಜಸವಲ್ಲ ರಾಜಕಾರಣಿಗಳಿಗೆ ಅವಮಾನವಾಗುವಂತಹ ಕಾರ್ಯಕ್ರಮ ಬೇಡ ಎಂದು ಕೈ ಮುಗಿದು ಮನವಿ ಮಾಡಿಕೊಂಡರು. ಇದನ್ನು ಓದಿ: ನಾವೇನು ಹಾಸ್ಯಗಾರರಾ? – ಮಾಧ್ಯಮಗಳ ವಿರುದ್ಧ ಸಿಎಂ ಕೆಂಡಾಮಂಡಲ
ಇದೇ ವೇಳೆ ಹೊರಟ್ಟಿ ಅವರ ಮೈತ್ರಿ ಸರ್ಕಾರ ವಿಸರ್ಜನೆ ಹೇಳಿಕೆ ವಿಚಾರವಾಗಿ ಮಾತನಾಡಿ. ಈ ಸಂದರ್ಭದಲ್ಲಿ ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ಅಧಿಕಾರ ಪಡೆದ ಕೇವಲ ಒಂದು ವರ್ಷಕ್ಕೆ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆ ಮಾಡೋದು ಸರಿಯಲ್ಲ. ಅಲ್ಲದೆ ಮೈತ್ರಿ ಸರ್ಕಾರ ಎಂದರೆ ಸಣ್ಣ ಪುಟ್ಟ ಸಮಸ್ಯೆ ಇದ್ದೆ ಇರುತ್ತೆ. ಸಿದ್ದರಾಮಯ್ಯನವರು ಇವತ್ತು ಡೆಲ್ಲಿಗೆ ಹೋಗಿ ಸಮಸ್ಯೆ ಸರಿಮಾಡಿಕೊಂಡು ಬರುತ್ತಾರೆ. ಇಷ್ಟಕ್ಕೆಲ್ಲ ಸರ್ಕಾರ ವಿಸರ್ಜನೆ ಮಾಡಲು ಆಗುತ್ತಾ ಎಂದು ಮತ್ತೊಮ್ಮೆ ಹೊರಟ್ಟಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.
ಮೋದಿ ಮಾಧ್ಯಮದವರಿಗೆ ಹೆದರುತ್ತಿದ್ದಾರೆ. ಈ ಹಿಂದೆ ಯಾವ ಪ್ರಧಾನಿಯೂ ಮಾಧ್ಯಮಕ್ಕೆ ಹೆದರಿಲ್ಲ. ಅದರೆ ಯಾಕೆ ಮೋದಿ ಮಾಧ್ಯಮಕ್ಕೆ ಹೆದರುತ್ತಿದ್ದಾರೆ. ಸಿನಿಮಾ ನಟನಿಂದ ಮೋದಿ ಸಂದರ್ಶನ ಮಾಡಿಸಿ ಕೊಳ್ಳುತ್ತಾರೆ. ಆದರೆ ಪತ್ರಕರ್ತರ ಸಂದರ್ಶನಕ್ಕೆ ಹೆದರುತ್ತಾರೆ ಎಂದು ಪ್ರಧಾನಿ ಅವರನ್ನು ಲೇವಡಿ ಮಾಡಿದರು.