– ಈ ಬಾರಿ ಮಾತ್ರವಲ್ಲ ಮುಂದಿನ ಚುನಾವಣೆಗೂ ನಾವು ಸಜ್ಜಾಗಿದ್ದೇವೆ
ಹಾಸನ: ದೇವೇಗೌಡರು ತಮ್ಮ ಸ್ಥಾನವನ್ನು ನನಗೆ ಧಾರೆ ಎರೆದಿದ್ದಾರೆ. ಟೀಕೆ ಬೇಡ ನಾವು ಅಭಿವೃದ್ಧಿ ಕಡೆ ದೃಷ್ಟಿ ಹರಿಸೋಣ. ಹಾಸನದಲ್ಲಿ ಬಿಜೆಪಿ ಬಾವುಟ ಕಿತ್ತು ಹಾಕಿ ಜೆಡಿಎಸ್ ಬಾವುಟ ಹಾರಿಸಬೇಕಿದೆ ಎಂದು ಪ್ರಜ್ವಲ್ ರೇವಣ್ಣ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಾಸನವನ್ನ ಜೆಡಿಎಸ್ ಭದ್ರಕೋಟೆಯನ್ನಾಗಿ ಮಾಡಬೇಕು. ಕೇವಲ ಲೋಕಸಭಾ ಚುನಾವಣೆ ಮಾತ್ರವಲ್ಲ, ಮುಂದಿನ ವಿಧಾನಸಭೆ ಚುನಾವಣೆಗೆ ಈಗಲೇ ನಾವು ಸಜ್ಜಾಗುತ್ತಿದ್ದೇವೆ. ಯಾವುದೇ ಕಾರ್ಯಕರ್ತರಿಗೆ ಕಷ್ಟ ಬಂದರೆ ಸ್ಪಂದಿಸುವ ಶಕ್ತಿಯನ್ನ ನನ್ನ ತಂದೆ ತಾಯಿ ನೀಡಿದ್ದಾರೆ. ಬಹಳಷ್ಟು ಮನೆಗೆ ದೇವೇಗೌಡರು ದೀಪ ಬೆಳಗಿಸಿದ್ದಾರೆ. ದೇವೇಗೌಡರು ನಮಗೆ ಅವರ ಸ್ಥಾನವನ್ನು ನನಗೆ ಧಾರೆ ಎರೆದಿದ್ದಾರೆ. ಹಿರಿಯ ಕಾರ್ಯಕರ್ತರು ಮತ್ತು ಹಿರಿಯರ ಸಲಹೆ ಪಡೆದು ಜನಪರ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಟೀಕೆ ಬೇಡ ನಾವು ಅಭಿವೃದ್ಧಿ ಕಡೆ ದೃಷ್ಟಿ ಹರಿಸೋಣ. ಟೀಕೆ ಎಂಬ ಪದವನ್ನ ನಾನು ಉಪಯೋಗಿಸಲ್ಲ. ಹಾಗೆಯೇ ಅತೀ ಹೆಚ್ಚು ಅಂತರದಲ್ಲಿ ಗೆಲ್ಲುತ್ತೇನೆ ಎಂದು ಪ್ರಜ್ವಲ್ ವಿಶ್ವಾಸ ವ್ಯಕ್ತಪಡಿಸಿದ್ದು, ಮಾರ್ಚ್ 22ರಂದು ನಾಮಪತ್ರ ಸಲ್ಲಿಸಲು ನಮ್ಮ ಹಿರಿಯರು ನಿಗದಿ ಮಾಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಪ್ರಜ್ವಲ್ ಅವರನ್ನು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು. ಪ್ರಜ್ವಲ್ರನ್ನ ಗೆಲ್ಲಿಸಿಕೊಡಿ ಎಂದು ಭವಾನಿ ರೇವಣ್ಣ ಜನರಲ್ಲಿ ಮನವಿ ಮಾಡಿದರು. ಅಲ್ಲದೆ ಕೆಲ ಬಿಜೆಪಿ ಕಾರ್ಯಕರ್ತರು ಜೆಡಿಎಸ್ಗೆ ಸೇರ್ಪಡೆಯಾಗಲಿದ್ದಾರೆ ಎಂದು ಅವರು ಹೇಳಿದರು.