– ಕುಟುಂಬ ರಾಜಕಾರಣ ಬಗ್ಗೆ ಎಚ್ಡಿಡಿ ಪುಸ್ತಕ ಬರೆಯಲಿ
ಶಿವಮೊಗ್ಗ: ಕುಟುಂಬ ರಾಜಕಾರಣ ಅಂದ್ರೆ ಏನು ಎಂದು ಡಿಕ್ಷನರಿ ಹಿಡಿದು ವಿವರಿಸಲಿ ಅಥವಾ ಅದರ ಬಗ್ಗೆ ಪುಸ್ತಕ ಬರೆಯಲಿ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ವಿರುದ್ಧ ಕಿಡಿಕಾರಿದ್ದಾರೆ.
ನಗರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಕುಟುಂಬ ರಾಜಕಾರಣ ಮಾಡುತ್ತಿಲ್ಲವೆಂದು ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. ಹಾಗಾದರೆ ಇಬ್ಬರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ನನ್ನ ಕುಟುಂಬವಲ್ಲ ಹಾಗೂ ನಾನು ಬ್ರಹ್ಮಚಾರಿ ಎಂದು ದೇವೇಗೌಡ ಅವರು ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.
ದೇವೇಗೌಡ ಅವರಿಗೆ 24 ಜನ ಮಕ್ಕಳು ಇದ್ದರೂ ಸಾಕಿತ್ತು. ರಾಜ್ಯದ ಎಲ್ಲಾ ಸ್ಥಾನಗಳಿಂದ ದೇವೇಗೌಡರ ಕುಟುಂಬವೇ ಸ್ಪರ್ಧಿಸಿದ ದಾಖಲೆಯಾಗುತ್ತಿತ್ತು ಎಂದ ಅವರು, ದೇವೇಗೌಡರಿಗೆ ಒಟ್ಟು ಎಷ್ಟು ಜನ ಮಕ್ಕಳು ಎನ್ನುವುದು ನಿಜವಾಗಿಯೂ ನನಗೆ ಗೊತ್ತಿಲ್ಲ. ಆದರೆ ಅವರ ಕುಟುಂಬದಲ್ಲಿ 28 ಜನ ಇಲ್ಲದಿರುವ ಬಗ್ಗೆ ನನಗೆ ಬೇಸರವಿದೆ ಲೇವಡಿ ಮಾಡಿದರು.
ಮಂಡ್ಯ ಅಭ್ಯರ್ಥಿಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ ಅವರು, ನಮ್ಮ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಬೇಕೋ? ಬೇಡವೋ ಎಂದು ಕಾದು ನೋಡುತ್ತೇವೆ. ಸುಮಲತಾ ಅಂಬರೀಶ್ ಅವರು ಬಿಜೆಪಿ ಅಭ್ಯರ್ಥಿಯಾಗುವ ಬಗ್ಗೆ ಅಥವಾ ಕಾಂಗ್ರೆಸ್, ಜೆಡಿಎಸ್ ನಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಖಚಿತ ಅಗಿಲ್ಲ ಎಂದರು.
ಜೆಡಿಎಸ್- ಕಾಂಗ್ರೆಸ್ ಮೈತ್ರಿಗೆ ಗ್ರಹಣ ಹಿಡಿದಿದೆ. ಅವರು ಯಾರಿಗೆ ಯಾವ ಕ್ಷೇತ್ರ ಎಂಬುದು ಇನ್ನೂ ಅಂತಿಮಗೊಳಿಸಿಲ್ಲ. ಅಷ್ಟೇ ಅಲ್ಲ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೋ, ಜೆಡಿಎಸ್ ಅಭ್ಯರ್ಥಿಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಯಾರೇ ಬಂದು ತಲೆಕೆಳಗಾಗಿ ನಿಂತರೂ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯೇ ಜಯ ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಡಿಸಿದರು.
ಭಯೋತ್ಪಾದಕರ ಮೇಲೆ ನಡೆಸಿದ ಪ್ರತಿ ದಾಳಿಯಿಂದ ದೇಶಭಕ್ತಿ ಇಮ್ಮಡಿಸಿದೆ. ರಾಷ್ಟ್ರ ಭಕ್ತಿಯ ಪ್ರತಿರೂಪವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹಜವಾಗಿ ಬೆಂಬಲ ವ್ಯಕ್ತವಾಗಿದೆ. ಈ ಬೆಳವಣಿಗೆ ಬಿಜೆಪಿ ವಿಶ್ವಾಸ ಹೆಚ್ಚಿಸಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv