– ನಿಖಿಲ್ ಯಾಕೆ ಮಂಡ್ಯದಲ್ಲಿ ರಾಜಕಾರಣ ಮಾಡಬಾರದು?
– ಯಡಿಯೂರಪ್ಪ ಮಂಡ್ಯದಲ್ಲಿ ಹುಟ್ಟಿ ಶಿವಮೊಗ್ಗಕ್ಕೆ ಹೋಗಿಲ್ವೇ?
ಬೆಂಗಳೂರು: ನಾನು ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ರಾಜಕೀಯ ಮಾಡುತ್ತಿದ್ದೇನೆ. ಹಾಗಾದರೆ ನಿಖಿಲ್ ಯಾಕೆ ಮಂಡ್ಯದಿಂದ ರಾಜಕಾರಣ ಮಾಡಬಾರದು ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಮಂಡ್ಯದಲ್ಲಿ ನಿಖಿಲ್ ಅವರು ಸ್ಪರ್ಧಿಸುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಚುನಾವಣೆ ಅಂದಮೇಲೆ ಎಲ್ಲಾ ಕಡೆ ಪರ ವಿರೋಧ ಇರುತ್ತೆ. ಇವತ್ತು ಎಲ್ಲೋ ಹುಟ್ಟಿ ಎಲ್ಲೋ ಸ್ಪರ್ಧೆ ಮಾಡಿ ಸದಸ್ಯರಾಗಿದ್ದಾರೆ. ಸದಾನಂದಗೌಡ ಮಂಗಳೂರಲ್ಲಿ ಹುಟ್ಟಿ ಬೆಂಗಳೂರು ಉತ್ತರದಲ್ಲಿ ಎಂಪಿ ಆಗಿದ್ದಾರೆ. ಹಾಗೆಯೇ ಯಡಿಯೂರಪ್ಪ ಅವರು ಮಂಡ್ಯದಲ್ಲಿ ಹುಟ್ಟಿ ಶಿವಮೊಗ್ಗದಲ್ಲಿ ರಾಜಕೀಯ ಮಾಡ್ತಿಲ್ವೆ? ನಾನು ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ರಾಜಕೀಯ ಮಾಡುತ್ತಿಲ್ಲವೇ? ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು ಎಂದು ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆಯನ್ನು ವಿರೋಧಿಸುತ್ತಿರುವ ಮಂದಿಗೆ ತಿರುಗೇಟು ನೀಡಿದ್ದಾರೆ.
ಸದ್ಯ ಮಂಡ್ಯ ಕ್ಷೇತ್ರದಲ್ಲಿ ಏನೇನು ನಡೆಯುತ್ತಿದೆ ಎಂಬುದು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಮಂಡ್ಯ ಜಿಲ್ಲೆಯ ಪ್ರೀತಿ ಅಭಿಮಾನವನ್ನು ದುರುಪಯೋಗ ಪಡಿಸಿಕೊಳ್ಳುವ ಕುಟುಂಬ ನಮ್ಮದಲ್ಲ. ಮಂಡ್ಯ ಜಿಲ್ಲೆಗೂ ನಮ್ಮ ಕುಟುಂಬಕ್ಕೂ ಹಲವು ವರ್ಷಗಳ ಸಂಬಂಧ ಇದೆ. ಯಾರು ಅವರ ನಾಯಕರಾಗಬೇಕು ಎನ್ನುವ ತೀರ್ಮಾನ ಆ ಜಿಲ್ಲೆಯ ಜನರು ಮಾಡ್ತಾರೆ. ಇದನ್ನು ಯಾರೋ ಪಕ್ಷದ ಮುಖಂಡರು ತೀರ್ಮಾನ ಮಾಡುವುದಲ್ಲ. ಜನರ ಮುಂದೆ ಬರುತ್ತೇವೆ. ಜನರು ತೀರ್ಮಾನ ಮಾಡ್ತಾರೆ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv