ಬೆಂಗಳೂರು: ಇಂದು ಸದನದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದೆ ಎನ್ನಲಾದ ಆಡಿಯೋ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಬೆಂಗಳೂರಿನ ಬಾಡಿಗೆ ಮನೆಯಲ್ಲಿದ್ದೇನೆ. ಅಷ್ಟು ದೊಡ್ಡ ಪ್ರಮಾಣದ ಹಣವನ್ನು ನಾನು ಎಲ್ಲಿ ಇಟ್ಟುಕೊಳ್ಳಲಿ ಎಂದು ಹೇಳುತ್ತಾ ಭಾವುಕರಾಗಿ ಕಣ್ಣೀರಿಟ್ಟರು.
ಸ್ಪೀಕರ್ ಮಾತಿನ ಮಧ್ಯೆ ಪ್ರವೇಶಿಸಿದ ಸಚಿವ ಕೃಷ್ಣೆಬೈರೇಗೌಡರು, ವಿಪಕ್ಷ ನಾಯಕರ ಮೇಲೆ ಆರೋಪ ಮಾಡಿದರು. ಈ ವೇಳೆ ಬಿಜೆಪಿ ಶಾಸಕ ಮಾಧುಸ್ವಾಮಿ, ಆಪರೇಷನ್ ಕಮಲ ಸದನದ ಒಳಗಡೆ ನಡೆದಿಲ್ಲ. ಹೀಗಾಗಿ ಆ ವಿಚಾರವನ್ನು ಇಲ್ಲಿ ಮಾತನಾಡೋದು ಸರಿಯಲ್ಲ ಎಂದು ಆಗ್ರಹಿಸಿದರು.
ಹೊರಗಡೆ ಮಾತನಾಡೋದನ್ನು ನೀವು ಇಷ್ಟು ಸೀರಿಯಸ್ ಆಗಿ ತೆಗೆದುಕೊಂಡು ಭಾವುಕರಾಗುವುದು ಬೇಡ. ಸದನದಲ್ಲಿ ಈ ರೀತಿಯಾಗಿ ನಡೆದಿದ್ದರೆ ಮೊದಲೇ ನಾವು ವಿರೋಧ ಮಾಡುತ್ತಿದ್ದೆವು. ಆ ವಿಚಾರ ಸದನದ ಹೊರಗಡೆ ನಡೆದಿದೆ. ನೀವು ಈ ರೀತಿ ಭಾವುಕರಾಗಿ ಮಾತನಾಡಿದ್ರೆ ನಾವು ಏನು ಮಾಡೋದು. ಮುಂದೆ ನೀವು ಏನು ಹೇಳಬಹುದು ಎಂಬ ಭಯ ಶುರುವಾಗಿದ್ದರಿಂದ ನಾನು ಮಾತನಾಡುತ್ತಿದ್ದೇನೆ ಎಂದರು.
ಕೃಷ್ಣಬೈರೇಗೌಡರು ಈ ರೀತಿ ನಮ್ಮ ಮೇಲೆ ಆರೋಪ ಮಾಡೋದು ಸರಿಯಲ್ಲ. ಎಲ್ಲಿ ನಡೆದಿದೆ, ಯಾರು ಮಾತನಾಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಎಲ್ಲೋ ನಡೆದ ವಿಚಾರವನ್ನು ಇಷ್ಟೊಂದು ತೀಕ್ಷ್ಣವಾಗಿ ಮಾತಾಡೋದು ತಪ್ಪಾಗುತ್ತದೆ. ರಮೇಶ್ ಕುಮಾರ್ ಅವರ ಬಗ್ಗೆ ಯಾರು ಏನು ಮಾತನಾಡ್ತಾರೆ ಎಂಬ ಆಡಿಯೋಗಳು ನಮ್ಮ ಬಳಿ ಇವೆ. ನೀವು ಅವಕಾಶ ನೀಡಿದ್ರೆ, ಸದನದಲ್ಲಿ ಹಾಜರು ಮಾಡುತ್ತೇನೆ. ಈ ಆಡಿಯೋಗೆ ಸಂಬಂಧಿಸಿದಂತೆ ತನಿಖೆ ನಡೆಸಬಹುದು. ಒಂದು ವೇಳೆ ನಮ್ಮಿಂದ ತಪ್ಪಾಗಿದ್ರೆ, ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಸದನದಲ್ಲಿ ಮಾತನಾಡಿದ್ರೆ ಹಕ್ಕುಚ್ಯುತಿ ಮಾಡಬಹುದು ಎಂದು ಕೃಷ್ಣೇಬೈರೇಗೌಡರಿಗೆ ತಿರುಗೇಟು ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv