ಮಂಡ್ಯ: ಕಬ್ಬಿನ ಬಾಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಸಮಸ್ಯೆ ಆಲಿಸಲು ಆಗಮಿಸಿದ್ದ ಮದ್ದೂರಿನ ಮಹಿಳಾ ತಹಸೀಲ್ದಾರ್ ಅವರು ರೈತರ ದುಸ್ಥಿತಿ ಕಂಡು ದುಃಖಪಟ್ಟರು.
ಮದ್ದೂರು ತಾಲೂಕಿನ ಚಾಂಶುಗರ್ ಕಾರ್ಖಾನೆ ಎದುರು ರೈತರು ಪ್ರತಿಭಟನೆ ನಡೆಸುತ್ತಿದ್ದು, ಅಲ್ಲಿ ರೈತರ ಸಮಸ್ಯೆ ಆಲಿಸಿದ ತಹಸೀಲ್ದಾರ್ ಗೀತಾ ಅವರು ಬೇಸರ ವ್ಯಕ್ತಪಡಿಸಿದರು. ನಂತರ ಮಾತನಾಡಿ, ಈ ಹಿಂದೆ ಕೋಲಾರದಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದಾಗ ಬರದಿಂದ ಹೆಚ್ಚು ರೈತರ ಆತ್ಮಹತ್ಯೆಗಳು ನಡೆಯುತ್ತಿದ್ದವು. ಆಗ ಅಲ್ಲಿನ ಜನ ಮಂಡ್ಯ ಸಂಪತ್ಭರಿತ ಜಿಲ್ಲೆ, ಅಲ್ಲಿ ಮಳೆಯಿದೆ, ಬೆಳೆಯಿದೆ ಎನ್ನುತ್ತಿದ್ದರು. ಆದರೆ, ಇಲ್ಲಿಯೂ ಅಪಾರ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ತುಂಬಾ ದು:ಖ ತಂದಿದೆ ಎಂದು ಕಣ್ಣೀರು ಹಾಕಿದರು.
ನಾನು ರೈತರಿಗಾಗಿ ಕೆಲಸ ಮಾಡುತ್ತೇನೆ. ಕಾರ್ಖಾನೆಯವರು ನಿಗದಿತ ದಿನದೊಳಗೆ ಹಣ ಪಾವತಿಸದ ಕಾರಣದಿಂದ ಸಕ್ಕರೆ ಕರ್ಖಾನೆಯ ಉಪಾಧ್ಯಕ್ಷರ ಜತೆ ಮಾತನಾಡಿದ್ದೇನೆ. ಇಲ್ಲಿನ ಪರಿಸ್ಥಿತಿ, ಕಾರ್ಖಾನೆಯವರ ಹೇಳಿಕೆ ಮತ್ತು ನಿಮ್ಮ ಅಹವಾಲನ್ನು ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತೇನೆ. ಅವರು ನೀಡುವ ಸೂಚನೆಯಂತೆ ತಕ್ಷಣ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ನಾನು ಕೂಡ ರೈತರ ಕುಟುಂಬದವಳು, ರೈತರ ಸಮಸ್ಯೆ ನನಗೆ ಗೊತ್ತು. ಚಿಕ್ಕ ವಯಸ್ಸಿನಿಂದಲೂ ರೈತರಿಗೋಸ್ಕರ ಏನಾದರೂ ಮಾಡಬೇಕೆಂಬ ಕನಸು ಕಂಡಿದ್ದೆ. ಶಿಕ್ಷಕಿ ಹಾಗೂ ನಾಗರಿಕ ನ್ಯಾಯಾಲಯದಲ್ಲಿ ಕೆಲಸ ಮಾಡಿದ್ದೇನೆ. ರೈತಗಾಗಿ ಕೆಲಸ ಮಾಡಬೇಕು ಅಂತ ನಾನು ಕೆಎಎಸ್ ಮಾಡಿ ಅಧಿಕಾರಿ ಆಗಿದ್ದೇನೆ ಎಂದು ತಿಳಿಸಿದರು.
https://www.youtube.com/watch?v=0vmdFdDexSc
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv