ಚಾಮರಾಜನಗರ: ಕಾಂಗ್ರೆಸ್ ಶಾಸಕರಾದ ಆನಂದ್ಸಿಂಗ್ ಮತ್ತು ಕಂಪ್ಲಿ ಗಣೇಶ್ ಅವರು ರೆಸಾರ್ಟಿನಲ್ಲಿ ಬಡಿದಾಡಿಕೊಳ್ಳಲು ಬಿಜೆಪಿಯೇ ಕಾರಣ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಪರೇಷನ್ ಕಮಲಕ್ಕೆ ಕೈ ಹಾಕಿದ್ದೇ ಇದಕ್ಕೆಲ್ಲ ಕಾರಣ. ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಹೋಗಿದ್ದಕ್ಕೆ ಅವರು ಹೊಡೆದಾಡಿಕೊಂಡಿದ್ದಾರೆ. ಕಾಂಗ್ರೆಸ್ಸಿನ ಎಲ್ಲಾ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ. ಅಲ್ಲದೇ ಕೆಲ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಅವರು ತಮ್ಮೊ0ದಿಗೆ ರೆಸಾರ್ಟಿಗೆ ಕರೆದುಕೊಂಡು ಹೋಗಿದ್ದರು. ಸಮ್ಮಿಶ್ರ ಸರ್ಕಾರವನ್ನು ಬೀಳಿಸಬೇಕು ಅಂತ ಈ ರೀತಿ ತಂತ್ರ ಮಾಡುತ್ತಿದ್ದಾರೆ ಅದು ಜನರಿಗೂ ಗೊತ್ತು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಶೀಘ್ರವೇ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಬಂಧನ, ಯಾವುದೇ ಒತ್ತಡವಿಲ್ಲ: ರಾಮನಗರ ಎಸ್ಪಿ
ಬಿಜೆಪಿ ಅವರು ರೆಸಾರ್ಟಿಗೆ ಶಾಸಕರನ್ನು ಕರೆಕೊಂಡು ಹೋದಾಗ ಅವರೊಂದಿಗೆ ಕಾಂಗ್ರೆಸ್ನ ಶಾಸಕರಾದ ಆನಂದ್ಸಿಂಗ್ ಮತ್ತು ಕಂಪ್ಲಿ ಗಣೇಶ್ ಕೂಡ ಹೋಗಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಹೊಡೆದಾಟವಾಗಿದೆ. ರಾಜ್ಯ ಹಾಗೂ ರಾಷ್ಟ್ರ ಬಿಜೆಪಿ ನಾಯಕರು ನಮ್ಮ ಶಾಸಕರನ್ನು ಸಂಪರ್ಕಿಸಿ, ನಮ್ಮ ಸರ್ಕಾರವನ್ನು ಅಭದ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿ ಮಾಡುವುದು ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿದಂತೆ ಆಗುತ್ತದೆ. ಸರ್ಕಾರ ಬಿದ್ದಾಗ ಬಿಜೆಪಿ ಅವರು ಅಧಿಕಾರಕ್ಕಾಗಿ ಪ್ರಯತ್ನ ಪಡಲಿ. ಅದನ್ನ ಬಿಟ್ಟು ಸಮ್ಮಿಶ್ರ ಸರ್ಕಾರಕ್ಕೆ ಸಮಯ ನೀಡದೇ ನಮ್ಮನ್ನು ಅಧಿಕಾರದಿಂದ ಬೀಳಿಸಲು ತಂತ್ರ ಮಾಡುವುದು ಸರಿಯಲ್ಲ ಎಂದು ಜಿ.ಟಿ ದೇವೇಗೌಡ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: Exclsuive |ಆನಂದ್ ಸಿಂಗ್ ಮೇಲಿನ ಹಲ್ಲೆಗೂ ಮೊದಲು ಖಾಸಗಿ ಗನ್ ಮ್ಯಾನಿಗೆ ಥಳಿಸಿದ್ದ ಗಣೇಶ್!
ಈ ಎಲ್ಲ ವಿಚಾರವನ್ನು ಜನರು ಗಮನಿಸುತ್ತಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಬಿಜೆಪಿಯವರೇ ಕಾಂಗ್ರೆಸ್ ಶಾಸಕರು ಜಗಳವಾಡುವಂತೆ ಮಾಡಿ, ಬಳಿಕ ಅವರೇ ಟೀಕೆ ಮಾಡುತ್ತಿದ್ದಾರೆ. ಜನರು ದಡ್ಡರಲ್ಲ, ಬುದ್ಧಿವಂತರು. ನಿಮಗೆ ಮುಂದೆ ಸಿಗುವ ಅವಕಾಶವನ್ನು ನೀವೇ ಕಳೆದುಕೊಳ್ಳುತ್ತಿದ್ದೀರಿ. ಪ್ರಜಾಪ್ರಭುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರವನ್ನು ಕೆಡವಲು ನೋಡುತ್ತಿರುವ ಕೆಲವನ್ನು ಜನ ಕ್ಷಮಿಸುವುದಿಲ್ಲ ಎಂದು ಬಿಜೆಪಿಯವರಿಗೆ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv