ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಇಂದು ಕೂಡ ಶೋಧ ಮುಂದುವರಿದಿದೆ. ಕಿಚ್ಚ ಸುದೀಪ್ ಅವರ ಜೆ.ಪಿ ನಗರ ನಿವಾಸದಲ್ಲೂ ದಾಳಿ ಮುಂದುವರಿದಿದ್ದು, ಪರಿಶೀಲನೆಯನ್ನು ಬೇಗ ಮುಗಿಸುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ಶನಿವಾರ ಬಿಗ್ಬಾಸ್ ಶೂಟಿಂಗ್ ಇದೆ. ನಾನು ಹೋಗಲೇಬೇಕು, ಇಲ್ಲದಿದ್ದಲ್ಲಿ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಗೆ ಅಡ್ಡಿಯಾಗುತ್ತದೆ. ಇಂದು ಸಂಜೆಯೊಳಗೆ ಪರಿಶೀಲನೆ ಮಾಡಿ ಮುಗಿಸುವಂತೆ ಸುದೀಪ್ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಐಟಿ ದಾಳಿ ವೇಳೆ ಬೆಳಕಿಗೆ ಬಂತು ಮಹತ್ವದ ವಿಚಾರಗಳು
ಗುರುವಾರ ಬೆಳಗ್ಗೆ ಐಟಿ ದಾಳಿ ನಡೆದಾಗ ಸುದೀಪ್ ಅವರು ಮನೆಯಲ್ಲಿ ಇರಲಿಲ್ಲ. ಅಧಿಕಾರಿಗಳು ಸುದೀಪ್ ಅವರಿಗೆ ಮನೆಗೆ ಬರಲು ಸೂಚಿಸಿದ್ದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯುತ್ತಿದ್ದ ಶೂಟಿಂಗ್ ರದ್ದುಗೊಳಿಸಿ ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ಮರಳಿದ್ದರು. ಇದನ್ನೂ ಓದಿ: ಆ ಒಂದು ಡೈರಿಯಿಂದ ಸ್ಟಾರ್ ನಟರ ಮನೆ ಮೇಲೆ ದಾಳಿ!
ಸುದೀಪ್ ಅವರ ಮನೆಗೆ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ನೀಡಲಾಗಿದೆ. ಸುದೀಪ್ ಅವರ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಸೇರಿ 12 ಜನರಿಗೆ ನಂದಿನಿ ಹೊಟೇಲ್ನಿಂದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.