ವಿಜಯಪುರ: ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಯಣ್ಣನ ನಾಡು ಆಗಿರುವ ಬೆಳಗಾವಿಯಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸುವ ತಯಾರಿ ಜೋರಾಗಿ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ನ ಸಮ್ಮಿಶ್ರ ಸರ್ಕಾರ ಸದ್ಯದಲ್ಲಿಯೇ ಉರುಳಲಿದೆ. ನಾನು ಹೇಳಿದ ಭವಿಷ್ಯ ಸತ್ಯವಾಗುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣನ ನಾಡು ಬೆಳಗಾವಿಯಲ್ಲಿ ಸರ್ಕಾರ ಉರುಳಿಸುವ ತಯಾರಿ ಜೋರಾಗಿ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲೇ ಬೆಂಕಿ ಹೊತ್ತಿ ಉರಿಯುತ್ತಿದೆ. ಜಾರಕಿಹೊಳಿ ಬ್ರದರ್ಸ್ ಹಾಗೂ ಹೆಬ್ಬಾಳ್ಕರ್ ನಡುವಿನ ಸಂಘರ್ಷ ಸಮ್ಮಿಶ್ರ ಸರ್ಕಾರ ಪತನಕ್ಕೆ ಮುನ್ನುಡಿಯಾಗಲಿದೆ ಎಂದು ಭವಿಷ್ಯ ನುಡಿದರು.
ರಾಹುಲ್ ಗಾಂಧಿ ಮಾನಸ ಸರೋವರಕ್ಕೆ ಹೋಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳೊದು ಗ್ಯಾರಂಟಿಯಾಗಿದೆ. ಏಕೆಂದರೆ ಇವರಿಗೆ ಶ್ರದ್ಧಾ ಕೇಂದ್ರಗಳ ಪಾವಿತ್ರ್ಯತೆ ಬಗ್ಗೆ ಗೊತ್ತಿಲ್ಲ. ಪವಿತ್ರ ಸ್ಥಾನಗಳಿಗೆ ಭೇಟಿ ನೀಡಿ ಚಿಕನ್ ಸೂಪ್ ತಿಂದರೇ ಹೇಗೆ? ಹೀಗಾಗಿ ರಾಹುಲ್ ಭೇಟಿ ನೆಗಟಿವ್ ಆಗಲಿದೆ ಎಂದು ವ್ಯಂಗ್ಯವಾಡಿದರು.
ಈ ವೇಳೆ ಪ್ರಧಾನಿ ಹತ್ಯೆಗೆ ಸಂಚು ಮಾಡಿದವರ ಪರವಾಗಿ ಮಾತನಾಡಿದವರ ವಿರುದ್ಧ ಹರಿಹಾಯ್ದ ಅವರು, ಮೋದಿಯವರ ಹತ್ಯೆಗೆ ಸ್ಕೆಚ್ ಹಾಕಿದವರನ್ನು ಚಿಂತಕರು ಎನ್ನುತ್ತಿದ್ದಾರೆ. ಅದೇ ರಾಜೀವ್ ಗಾಂಧಿಯವರನ್ನು ಕೊಂದವರನ್ನು ಭಯೋತ್ಪಾದಕರು ಎನ್ನುತ್ತಾರೆ. ಅಂದರೆ ಇವರಿಗೆ ಪ್ರಧಾನಿಗಳಲ್ಲಿ ವ್ಯತ್ಯಾಸವಿದೆಯಾ ಎಂದು ಪ್ರಶ್ನಿಸಿದರು.
ಗೌರಿ ಡೇ ಆಚರಣೆ ಕುರಿತು ಪ್ರತಿಕ್ರಿಯಿಸಿ, ದೇಶದ ಹಲವು ಕಡೆ ಹಿಂದೂಗಳ ಹತ್ಯೆ ನಡೆದಿದೆ. ಈ ಕುರಿತು ಯಾರಾದರೂ ಡೇ ಆಚರಣೆ ಮಾಡಿದ್ದಾರಾ. ಗೌರಿ ಡೇ ಆಚರಣೆ ಮಾಡುವುದು ನಾಚಿಕೆಗೇಡು ಸಂಗತಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv