ಮಡಿಕೇರಿ: ಕೊಡಗಿನ ಮಹಾಮಳೆಗೆ ಅನೇಕರು ತಮ್ಮ ಸೂರುಗಳನ್ನು ಕಳೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಕೊಡಗಿನ ಆದಿವಾಸಿ ದಂಪತಿ ಭೂದಾನ ಮಾಡಲು ಮುಂದಾಗಿದ್ದು, ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.
ಮಡಿಕೇರಿ ತಾಲೂಕಿನ ಯವಕಪಾಡಿ ಗ್ರಾಮದ ದಂಪತಿ ಮಲೆಕುಡಿಯ ಪೂಣಚ್ಚ ಅವರು ತಮ್ಮ ಬಳಿ ಇರುವ ಮೂರು ಎಕರೆ ಭೂಮಿಯಲ್ಲಿ ಎರಡು ಎಕರೆ ಭೂಮಿಯನ್ನು ಕೊಡಲು ಮುಂದಾಗಿದ್ದಾರೆ. ಮಳೆಯಿಂದ ಕೊಡಗು ಪ್ರವಾಹಕ್ಕೆ ತುತ್ತಾಗಿದ್ದು, ಪ್ರವಾಹದಿಂದ ನಿರಾಶ್ರಿತರಾದ ಜನರಿಗಾಗಿ ಮತ್ತೆ ಕೊಡಗು ನಿರ್ಮಾಣ ಮಾಡುವ ಸಲುವಾಗಿ ಭೂಮಿ ಕೊಡಲು ಸಿದ್ಧರಾಗಿದ್ದಾರೆ. ಅಲ್ಲದೆ ತಮಗೆ ಮಕ್ಕಳು ಇಲ್ಲ. ತಂದೆ ತಾಯಿ ಇಲ್ಲದ ಮಕ್ಕಳಿದ್ದರೆ ತಾವೇ ಸಾಕುತ್ತೇವೆ ಎಂದು ಹೇಳಿದ್ದಾರೆ.
ಕೊಡಗು ಪ್ರವಾಹದಿಂದ ಮನೆ ಕಳೆದುಕೊಂಡಿರುವರಿಗಾಗಿ ನನ್ನ ಆಸ್ತಿಯಲ್ಲಿ ಎರಡು ಎಕರೆ ಜಾಗವನ್ನು ದಾನವಾಗಿ ಕೊಡಲು ಹೃಯದ ಪೂರ್ವಕವಾಗಿ ಒಪ್ಪಿಕೊಂಡಿದ್ದೇನೆ. ನಮಗೆ ಹಲವು ವರ್ಷಗಳಿಂದ ಮಕ್ಕಳಿಲ್ಲ. ಯಾರಾದರು ಪ್ರವಾಹದಿಂದ ತಂದೆ-ತಾಯಿಯನ್ನು ಕಳೆದುಕೊಂಡಿರುವ ಮಕ್ಕಳಿದ್ದರೆ, ಅಂತಹವರನ್ನು ದತ್ತು ತೆಗೆದುಕೊಂಡು ಚನ್ನಾಗಿ ಸಾಕುತ್ತೇವೆ ಎಂದು ಮಲೆಕುಡಿಯ ಪೂಣಚ್ಚ ದಂಪತಿ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಈ ದಂಪತಿ ಬೆಟ್ಟದ ಮೇಲೆ ವಾಸವಾಗಿದ್ದು, ಅಲ್ಲಿಗೆ ಯಾವುದೇ ವಾಹನಗಳು ಹೋಗಲ್ಲ. ಜೀಪ್ ಮೂಲಕವೇ ದಂಪತಿಗಳು ವಾಸವಿರುವ ಜಾಗಕ್ಕೆ ತೆರಳಬೇಕಿದೆ. ಹಾಗಾಗಿ ಬೆಟ್ಟದ ಮೇಲೆ ವಾಸ ಮಾಡಲು ಸಾಧ್ಯವಿಲ್ಲ ಹಾಗು ಆ ಸ್ಥಳ ತುಂಬಾ ಅಪಾಯಕಾರಿ. ಅವರು ಸಹ ಆ ಜಾಗ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಬರುವುದು ಉತ್ತಮ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv